ಬಿಜೆಪಿಗೆ ತಾಕತ್ತಿದ್ದರೆ ಮಂಗಳೂರು ರೈಲು ನಿಲ್ದಾಣಕ್ಕೆ ನಾರಾಯಣ ಗುರು ಹೆಸರು ಇಡಲಿ: ಬಿ.ವಿ ಶ್ರೀನಿವಾಸ್ ಸವಾಲು
ದ.ಕ. ಜಿಲ್ಲಾ ಯುವ ಕಾಂಗ್ರೆಸ್ನಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
ಮಂಗಳೂರು, ಆ.23: ಹೆಸರುಗಳ ಬದಲಾವಣೆ, ಸರಕಾರಿ ಸಂಸ್ಥೆಗಳ ಮಾರಾಟ ಮಾಡುವುದರಲ್ಲಿ ನಿಸ್ಸೀಮರಾದ ಬಿಜೆಪಿಯವರು ತಾಕತ್ತಿದ್ದರೆ ಮಂಗಳೂರು ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ನಾಮಕರಣ ಮಾಡಲಿ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸವಾಲು ಎಸೆದಿದ್ದಾರೆ.
ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ‘ಬ್ರಹ್ಮಶ್ರೀ ನಾರಾಯಣ ಗುರು’ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ, ಧಾರ್ಮಿಕ, ಸಮಾಜ ಸುಧಾರಕ, ಏಕತೆಯ ಚಳವಳಿಗೆ ನಾಂದಿ ಹಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು 1908ರಲ್ಲಿ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು ಎನ್ನುವ ಉಲ್ಲೇಖಗಳಿವೆ. ಗುರುಗಳ ಮೇಲೆ ಅಭಿಮಾನ ಇದ್ದಿದ್ದೇ ನಿಜವಾದಲ್ಲಿ ನಾರಾಯಣ ಗುರುಗಳ ಹೆಸರನ್ನು ಮಂಗಳೂರು ರೈಲು ನಿಲ್ದಾಣಕ್ಕೆ ಬಿಜೆಪಿ ಸರಕಾರ ನಾಮಕರಣ ಮಾಡುವಂತಾಗಲಿ ಎಂದರು.
ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು, ಹೆಸರುಗಳನ್ನು ಬದಲಾಯಿಸುವವರು ಇಂತಹ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅವರ ಮೇಲೆ ಇಂತಹ ವಿಶ್ವಾಸ ಇಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗ ಮಂಗಳೂರು ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರನ್ನು ನಾಮಕರಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಿ.ವಿ. ಶ್ರೀನಿವಾಸ್ ಭಾಷಣದ ಮಧ್ಯೆ ಎದ್ದು ನಿಂತ ಕಾಂಗ್ರೆಸ್ ಮುಖಂಡ ಶಶಿಧರ್ ಹೆಗ್ಡೆ, ‘ಮಂಗಳೂರು ರೈಲು ನಿಲ್ದಾಣಕ್ಕೆ ಗುರುಗಳ ಹೆಸರು ಇಡುವ ಬಗ್ಗೆ ಕಾಂಗ್ರೆಸ್ನ ಫಲದಿಂದಾಗಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ಇಲ್ಲಿಯವರೆಗೆ ನಾಮಕರಣ ಪ್ರಕ್ರಿಯೆ ನಡೆದಿಲ್ಲ' ಎಂದು ಉತ್ತರಿಸಿದರು.
ನಂತರ ತಮ್ಮ ಭಾಷಣವನ್ನು ಮುಂದುವರಿಸಿದ ಬಿ.ವಿ. ಶ್ರೀನಿವಾಸ್, ‘ಮಂಗಳೂರು ರೈಲು ನಿಲ್ದಾಣಕ್ಕೆ ಈಗಾಗಲೇ ಗುರುಗಳ ಹೆಸರು ನಾಮಕರಣದ ಬಗ್ಗೆ ಕಾಂಗ್ರೆಸ್ ಜಿಲ್ಲಾ ಸಮಿತಿಯು ಸಾಕಷ್ಟು ಪ್ರಯತ್ನ ಪಟ್ಟಿದೆ. ಬಿಜೆಪಿ ಸರಕಾರವು ಕೂಡಲೇ ಹೆಸರು ಇಡುವ ಪ್ರಕ್ರಿಯೆಗೆ ಚಾಲನೆ ನೀಡಲಿ ಎಂದು ತಾಕೀತು ಮಾಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ನೇತೃತ್ವದಲ್ಲಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ಕುವೆಂಪು, ಸಂತ ಶಶಿನಾಳ ಶರೀಫರು ಸಹಿತ ಹಲವು ಮಹನೀಯರು ಸಾಧನೆ, ತತ್ವ ಸಿದ್ಧಾಂತಗಳನ್ನು ಜನರಲ್ಲಿಗೆ ಕೊಂಡೊಯ್ಯುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ಸಮಯಕ್ಕಾಗಿ ಕಾದು ಕುಳಿತುಕೊಳ್ಳುವ ಅಗತ್ಯವಿಲ್ಲ ಎಂದರು.
ನಾರಾಯಣ ಗುರುಗಳ ತತ್ವ, ಸಿದ್ಧಾಂತ, ವಿಚಾರಗಳು ಆದರ್ಶವಾಗಿದೆ. ಕಾಂಗ್ರೆಸ್ ಪಕ್ಷವು ನಾರಾಯಣ ಗುರುಗಳ ಸಿದ್ಧಾಂತವನ್ನು ದೇಶಾದ್ಯಂತ ಪಸರಿಸಲಿದೆ. ಈ ಮೂಲಕ ಅವರ ತತ್ವಗಳನ್ನು ಯುವ ಜನಾಂಗದ ಕಡೆಗೆ ಕಾರ್ಯಕರ್ತರು ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರಕಾರವು ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ. ದೇಶದಲ್ಲಿ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಸರಕಾರದ ಕ್ರಮಗಳಿಂದಾಗಿ ರೈತರು ಅಕ್ಷರಶಃ ತತ್ತರಿಸಿದ್ದಾರೆ. ಸಣ್ಣ ವ್ಯಾಪಾರಸ್ಥರು, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಬಗ್ಗೆ ಕೇಂದ್ರ ಸರಕಾರ ಮಾತನಾಡಲಿ. ಕೇವಲ ಆರೋಪ ಮಾಡುವುದರ ಹೊರತು ಬಿಜೆಪಿಯು ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಜವಾಹರಲಾಲ್ ನೆಹರೂ ಅವರು ದೇಶಕ್ಕಾಗಿ ಒಂಬತ್ತು ವರ್ಷ ಜೈಲುವಾಸ ಅನುಭವಿಸಿದರು. ಈಗಿನ ಬಿಜೆಪಿಗರು ಯಾವ ಕಾರಣಕ್ಕೆ ಜೈಲಿಗೆ ಹೋಗುತ್ತಿದ್ದಾರೆ ಎನ್ನುವುದು ರಹಸ್ಯವೇನಲ್ಲ ಎಂದರು.
ಕೋವಿಡ್ ಸಂಕಷ್ಟದಲ್ಲಿ ತನಗೆ ‘ಆಕ್ಸಿಜನ್ ಮ್ಯಾನ್ ಆಫ್ ಇಂಡಿಯ’ ಎಂದು ಹೆಸರು ಬರಲು ನಾನೊಬ್ಬನೇ ಕೆಲಸ ಮಾಡಿಲ್ಲ. ದೇಶಾದ್ಯಂತ ಕಾಂಗ್ರೆಸ್ನ ಕೋಟ್ಯಂತರ ಕಾರ್ಯಕರ್ತರು ದುಡಿದಿದ್ದಾರೆ. ಈ ಎಲ್ಲ ಸ್ಥಾನಮಾನಗಳು ಕಾರ್ಯಕರ್ತರಿಗೆ ಸಮರ್ಪಿಸುವುದಾಗಿ ಅವರು ಹೇಳಿದರು.
ಚಡ್ಡಿ ಹೋಗಿ ಪ್ಯಾಂಟ್ ಬಂದರೂ ಬಿಜೆಪಿ, ಸಂಘಪರಿವಾರದ ಯೋಚನೆಗಳು ಬದಲಾಗುವುದಿಲ್ಲ. ಆರೆಸ್ಸೆಸ್ ಮುಕ್ತ ಅನ್ನುವುದು ಬದಲು ಅವರಾಗಿ ಅವರೇ ಕಳೆದು ಹೋಗುತ್ತಾರೆ. ಸೂರ್ಯ ಚಂದ್ರ ಇರುವವರೆಗೆ ಕಾಂಗ್ರೆಸ್ ಮುಕ್ತ ಅಸಾಧ್ಯ ಎಂದು ಬಿ.ವಿ. ಶ್ರೀನಿವಾಸ ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ, ಶಾಸಕ ಯು.ಟಿ. ಖಾದರ್, ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪಿ.ವಿ. ಮೋಹನ್, ಐವನ್ ಡಿಸೋಜ, ಕಾಂಗ್ರೆಸ್ನ ಹಿರಿಯ ಮುಖಂಡರಾದ ಬಿ.ಇಬ್ರಾಹಿಂ, ಬಿ.ಎಚ್. ಖಾದರ್, ಮಿಥುನ್ ರೈ, ಅನಿಲ್ ಯಾದವ್, ವಿದ್ಯಾ ಬಾಲಕೃಷ್ಣನ್, ಭವ್ಯಾ ಕೆ.ಆರ್., ಕಣಚೂರು ಮೋನು, ದೀಪಿಕಾ ರೆಡ್ಡಿ, ಮನ್ನಾರ್ ಮಣ್ಣನ್, ರಾಜಕುಮಾರ ಪ್ರದೀಪ್, ಚೈತ್ರಾ, ಸಿರಿಲ್ ಪ್ರಭು, ಸರ್ಫರಾಜ್ ನವಾಝ್, ಇಬ್ರಾಹಿಮ್ ಕೋಡಿಜಾಲ್, ಶಶಿಧರ್ ಹೆಗಡೆ, ವಿಶ್ವಾಸ್ ದಾಸ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.
‘ಲುಕ್ಮಾನ್ ತಂಡದ ಕಾರ್ಯ ಮಾದರಿ’
ಇಡೀ ದೇಶವೇ ಕೋವಿಡ್ ಸಂಕಷ್ಟದಲ್ಲಿದ್ದಾಗ ದೇಶಪ್ರೇಮದ ಹೆಸರಿನಲ್ಲಿ ಬೇರೆ ಬೇರೆ ಸಂಘಟನೆಗಳ ಕಾರ್ಯಕರ್ತರು ಮಾಸ್ಕ್ ಧರಿಸಿ ಮನೆಯಲ್ಲಿ ಕುಳಿತಿದ್ದರು. ಆದರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ನೇತೃತ್ವದ ತಂಡವು ಕೋವಿಡ್ ಸಮಯದಲ್ಲಿ ವ್ಯಾಪಕ ಕೆಲಸ ಮಾಡಿದೆ. ಈ ವೇಳೆ ಸಹಸ್ರಾರು ನಿರಾಶ್ರಿತರು, ಬಡವರ ಹಸಿವು ನೀಗಿಸಿದೆ. ಈ ಮೂಲಕ ಲುಕ್ಮಾನ್ ಬಂಟ್ವಾಳ ನೇತೃತ್ವದ ತಂಡದ ಕಾರ್ಯವು ಮಾದರಿಯಾಗಿದೆ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಪ್ರಶಂಸೆ ವ್ಯಕ್ತಪಡಿಸಿದರು.
ಮನುವಾದಿಗಳಿಗೆ ನಾರಾಯಣ ಗುರು ಆದರ್ಶವಾಗಲಿ: ಲುಕ್ಮಾನ್ ಬಂಟ್ವಾಳ
ಇಡೀ ದೇಶದಲ್ಲಿ ಮನುವಾದಿಗಳು, ಸಂಘಪರಿವಾರದವರು ಜಾತಿ, ಧರ್ಮ, ಸಮುದಾಯಗಳ ಮಧ್ಯೆ ಗೋಡೆ ಸೃಷ್ಟಿಸುತ್ತಾ ಹೋಗುತ್ತಿದ್ದಾರೆ. ಇಂಥವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಆದರ್ಶವಾಗಬೇಕು. ಆಗಲಾದರೂ ಮನುವಾದಿಗಳು ಪಾಠ ಕಲಿಯಬಹುದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ತಿಳಿಸಿದ್ದಾರೆ.
ನಾರಾಯಣ ಗುರುಗಳು ಮನುಕುಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಚಳವಳಿ ನಡೆಸಿದ್ದಾರೆ. ಎಲ್ಲ ಜನರಿಗೂ ಶಾಲೆ, ದೇವಸ್ಥಾನ ಪ್ರವೇಶಿಸಲು ಅವಕಾಶವಿದೆ ಎಂದು ಪ್ರತಿಪಾದಿಸಿದವರು ನಾರಾಯಣ ಗುರು. ಇವರು ಸಮಾಜಗಳನ್ನು ಒಗ್ಗೂಡಿಸಿದ ಮಹಾನುಭಾವ ಎಂದು ಹೇಳಿದರು.
ಕೇರಳ ಹಾಗೂ ಕರ್ನಾಟಕದಲ್ಲಿ ದೊಡ್ಡ ಬದಲಾವಣೆಯನ್ನೇ ಗುರುಗಳು ತಂದಿದ್ದಾರೆ. ನಾರಾಯಣ ಗುರುಗಳ ಜಯಂತಿ ಆಚರಣೆ ಇಂದಿಗೆ ಸೀಮಿತವಾಗದೇ ಅವರ ಸಿದ್ಧಾಂತವನ್ನು ಕಾರ್ಯಕರ್ತರು ಎಲ್ಲರಿಗೂ ತಲುಪಿಸಬೇಕು. ಗುರುಗಳ ವಿಚಾರಧಾರೆಯನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಈ ಬಗ್ಗೆ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಏರ್ಪೋರ್ಟ್ನಿಂದ ಕುದ್ರೋಳಿವರೆಗೆ ಕಾಂಗ್ರೆಸ್ ಬೈಕ್ ರ್ಯಾಲಿ
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ವಿಮಾನ ನಿಲ್ದಾಣದಿಂದ ಕುದ್ರೋಳಿ ದೇವಸ್ಥಾನದವರೆಗೆ ಅದ್ದೂರಿ ಬೈಕ್ ರ್ಯಾಲಿ ನಡೆಸಿದರು.ರ್ಯಾಲಿಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಸೇರಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.