ಸಿಟ್ಟಿಗೆದ್ದ ಕೊಡ್ಯಡ್ಕ ದೇವಳದ ಆನೆ: ಹೆದರಿ ಓಡಿದ ಕೂಲಿ ಕಾರ್ಮಿಕ ಜಾರಿಬಿದ್ದು ಮೃತ್ಯು
ಮೂಡುಬಿದಿರೆ, ಸೆ.7: ಆಹಾರ ನೀಡುತ್ತಿದ್ದ ವೇಳೆ ಸಿಟ್ಟಿಗೆದ್ದು ಆನೆ ಘೀಳಿಟ್ಟಾಗ ಹೆದರಿ ಓಡಿದ ಕಾರ್ಮಿಕನೋರ್ವ ಕಲ್ಲುಹಾಸಿದ ನೆಲಕ್ಕೆ ಜಾರಿಬಿದ್ದು ಮೃತಪಟ್ಟ ಘಟನೆ ಕೊಡ್ಯಡ್ಕ ದೇವಸ್ಥಾನದ ಆವರಣದಲ್ಲಿ ಸೋಮವಾರ ಅಪರಾಹ್ನ ನಡೆದಿರುವುದು ವರದಿಯಾಗಿದೆ.
ಮೃತರನ್ನು ಕಾರ್ಕಳ ಕೈಗಾರಿಕಾ ಪ್ರದೇಶದ ನಿವಾಸಿ ವಿಶ್ವನಾಥ ದೇವಾಡಿಗ(58) ಎಂದು ಗುರುತಿಸಲಾಗಿದೆ. ಇವರು ಕೊಡ್ಯಡ್ಕ ದೇವಸ್ಥಾನದ ಕಾರ್ಮಿಕ ಎನ್ನಲಾಗಿದೆ.
ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡ್ಯಡ್ಕ ದೇವಸ್ಥಾನದ ಆನೆಗೆ ಆಹಾರ ತರಲೆಂದು ಅದರ ಮಾವುತ ಹೊರ ಹೋದ ವೇಳೆ ಈ ಘಟನೆ ಸಂಭವಿಸಿದೆ. ಮಾವುತನಿಲ್ಲದ ವೇಳೆ ಆನೆಗೆ ಆಹಾರ ನೀಡಿದ ವಿಶ್ವನಾಥ ದೇವಾಡಿಗ ಆನೆಯನ್ನು ಸತಾಯಿಸಿದರೆನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಆನೆ ಒಮ್ಮೆಲೆ ಸೊಂಡಿಲು ಎತ್ತಿ ಮುಂದಕ್ಕೆ ಬರಲೆತ್ನಿಸಿತ್ತೆನ್ನಲಾಗಿದೆ. ಹೆದರಿದ ವಿಶ್ವನಾಥ ದೇವಾಡಿಗ ಅಲ್ಲಿಂದ ಓಡಿದ್ದು, ಆಗ ಕಾಲು ಜಾರಿ ಕಲ್ಲು ಹಾಸಿದ ನೆಲಕ್ಕೆ ಬಿದ್ದು ತಲೆಗೆ ತೀವ್ರ ಗಾಯಗೊಂಡಿದ್ದರೆನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.