ಮರಳು ಮಾಫಿಯಾದಿಂದ ನೆಸರ್ಗಿಕ ಸಂಪತ್ತು ಲೂಟಿ ಅವ್ಯಾಹತ!
ಕರಾವಳಿಯಲ್ಲಿ ಎಗ್ಗಿಲ್ಲದೆ ಸಾಗಿದ ಮರಳು ಅಕ್ರಮ ಗಣಿಗಾರಿಕೆ: ಸ್ಥಳೀಯರ ಆರೋಪ
ಮಂಗಳೂರು, ಸೆ.6: ರಾಜ್ಯ ಸರಕಾರವು ಮರಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದೆ. ಆದರೂ ಕೆಲವೆಡೆ ಅಧಿಕಾರಿಗಳ ಕಣ್ಣು ತಪ್ಪಿಸಿ ಮರಳು ಮಾಫಿಯಾ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಈ ಮಧ್ಯೆ ದ.ಕ. ಜಿಲ್ಲೆಯಲ್ಲಿಯೂ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿರುವ ಆರೋಪ ಕೇಳಿಬಂದಿದೆ.
ಮಂಗಳೂರು ನಗರದ ಬಂಗ್ರಕೂಳೂರು ಭಾಗದಲ್ಲಿ (ತಂಬೇಲ ಗ್ರಾಮದ ಕಡೆಗೆ ತೆರಳುವ ಸೇತುವೆ) ಗುರುಪುರ ನದಿಯಲ್ಲಿ ಬೋಟುಗಳಲ್ಲಿ ರಾಜಾರೋಷವಾಗಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ಹಾಡಹಗಲೇ ಕೊಳ್ಳೆ ಹೊಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಮಧ್ಯರಾತ್ರಿಯಿಂದಲೇ ಆರಂಭವಾಗುವ ಅಕ್ರಮ ಮರಳುಗಾರಿಕೆಯು ಮಧ್ಯಾಹ್ನದವರೆಗೂ ನಿರಾತಂಕವಾಗಿ ಸಾಗುತ್ತಲೇ ಇದೆ. ಪ್ರಾಕೃತಿಕವಾದ ಸಂಪತ್ತನ್ನು ಸಂಪೂರ್ಣವಾಗಿ ಅಪೋಶನ ತೆಗೆದುಕೊಳ್ಳುವಂತೆ ಅವ್ಯಾಹತ ಲೂಟಿ ಮುಂದುವರಿದಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಬಂಗ್ರಕೂಳೂರಿನಲ್ಲಿ ಮರಳು ಮಾಫಿಯಾದವರು ಸುಮಾರು 15 ದಿನಗಳಿಂದ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಸದ್ಯ ಇವರು ತೆಗೆಯುತ್ತಿರುವ ಜಾಗವು ಮರಳುಗಾರಿಕೆಗೆ ನಿಷೇಧವಿರುವ ಸ್ಥಳವಾಗಿದೆ. ಬಂಗ್ರಕೂಳೂರಿನಿಂದ ಸ್ವಲ್ಪ ದೂರಕ್ಕೆ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆಯಾದರೂ ಇಲ್ಲಿ ನಿರ್ಬಂಧಿಸಲಾಗಿದೆ. ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ನಿಕೋಲಸ್ ಡಿಸೋಜ.
ರಾತ್ರಿ-ಹಗಲೆನ್ನದೇ ನದಿಯಲ್ಲಿ ತೆಗೆಯಲ್ಪಡುವ ಮರಳನ್ನು ಹಲವು ಬೋಟುಗಳಲ್ಲಿ ಸಾಗಿಸಲಾಗುತ್ತಿದೆ. ಸಮೀಪದಲ್ಲೇ ಮರಳನ್ನು ಸಂಗ್ರಹಿಸಿ, ಸಾಗಾಟ ಮಾಡಲಾಗುತ್ತಿದೆ. ಪ್ರತಿಯೊಂದು ಬೋಟುಗಳಲ್ಲಿ 15ರಿಂದ 20 ಮಂದಿ ಇರುತ್ತಾರೆ. ಬೋಟಿನಲ್ಲಿ ಮರಳು ಅಗೆಯಲು ಸುಮಾರು 30 ಅಡಿ ಉದ್ದನೆಯ ಬಿದಿರಿನ ಕೋಲುಗಳನ್ನು ಬಳಸುತ್ತಾರೆ. ಕೋಲಿಗೆ ಬ್ಯಾಗ್ ಕಟ್ಟಿ ಮೇಲಿನಿಂದ ಭಾರ ಹಾಕುತ್ತಾರೆ. ಪಕ್ಕದಲ್ಲಿರುವವರು ಅದನ್ನು ಮೇಲೆ ಎಳೆಯುತ್ತಾರೆ. ಕೋಲಿಗೆ ಕಟ್ಟಿದ ಬ್ಯಾಗ್ನ್ನು ಆಳನದಿಗೆ ಬಿಟ್ಟಾಗ ಅದು ಬಹುತೇಕ ಮರಳನ್ನು ತುಂಬಿ ತರುತ್ತದೆ. ಹೀಗೆ ನಿರಂತವಾಗಿ ಮರಳು ಲೂಟಿ ಮಾಡಲಾಗುತ್ತಿದೆ ಎನ್ನುತ್ತಾರೆ ಅವರು.
ಅಧಿಕಾರಿಗಳ ವೌನ ಮರಳು ಮಾಫಿಯಾಗೆ ಬೆಂಬಲವೇ?:
ಬಂಗ್ರಕೂಳೂರಿನಲ್ಲಿ ಪರವಾನಿಗೆ ಲಭಿಸದ ಸ್ಥಳದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮರಳು ಸಾಗಾಟ ನಡೆಯುತ್ತಿದ್ದರೂ, ಗಣಿ ಇಲಾಖೆ ಅಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿ ಗಳು ಮೌನ ವಹಿಸಿದ್ದಾರೆ.ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಇವರ ಈ ಮೌನವು ಮಾಫಿಯಾಗೆ ಬೆಂಬಲಿಸುವಂತಿ ದೆಯೋ ಏನೋ ತಿಳಿಯದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಾಮರ್ಶೆ ನಡೆಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಬಂಗ್ರಕೂಳೂರಿನ ಇದೇ ಸ್ಥಳದಲ್ಲಿ ಇದಕ್ಕೂ ಮೊದಲು ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಸ್ಥಳೀಯರ ಒತ್ತಾಯದಿಂದಾಗಿ ಅದನ್ನು ನಿಲ್ಲಿಸಲಾಗಿತ್ತು. ಆದರೆ ಕೆಲವು ದಿನಗಳಿಂದ ಪುನಃ ಅಕ್ರಮ ಮರಳುಗಾರಿಕೆ ಆರಂಭವಾಗಿದೆ. ಆರಂಭದಲ್ಲಿ ಪೊಲೀಸರಿಗೆ ಹೆದರುತ್ತಿದ್ದ ಮಾಫಿಯಾದವರು ಇತ್ತೀಚೆಗೆ ಯಾರಿಗೂ ಹೆದರುತ್ತಿಲ್ಲ ಎನ್ನುತ್ತಾ ನಿಟ್ಟುಸಿರು ಬಿಡುತ್ತಾರೆ ಸ್ಥಳೀಯರು.
ಅಪಾಯದಂಚಿನಲ್ಲಿ ಮನೆಗಳು!: ಗುರುಪುರ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ಹಾಡಹಗಲೇ ನಡೆಯುತ್ತಿದೆ. ನದಿಗೆ ಹೊಂದಿಕೊಂಡಂತಿರುವ ರಸ್ತೆ ಇದೆ. ರಸ್ತೆಯ ಪಕ್ಕದಲ್ಲೇ ಹಲವಾರು ಮನೆಗಳಿವೆ. ನದಿಯಲ್ಲಿ ಮರಳು ಗಣಿಗಾರಿಕೆ ಮಾಡುವುದರಿಂದ ನದಿಯಲ್ಲಿ ಆಳ ಹೆಚ್ಚುತ್ತಿದೆ. ಇದರಿಂದ ನೇರವಾಗಿ ರಸ್ತೆಗೆ ಪೆಟ್ಟು ಬಿದ್ದಲ್ಲಿ ಇಲ್ಲಿನ ಸಾಕಷ್ಟು ಮನೆಗಳಿಗೂ ಅಪಾಯ ಕಾದಿದೆ. ಇದೇ ಪರಿಸ್ಥಿತಿ ಮುಂದುವರಿದದ್ದೇ ಆದಲ್ಲಿ ಮನೆಗಳು ನದಿಪಾಲಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಸ್ಥಳೀಯರು.
ಗುರುಪುರ ನದಿಯಲ್ಲಿ ಹಲವು ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಪ್ರಕೃತಿದತ್ತವಾಗಿ ಸಿಗುವ ಸಂಪತ್ತನ್ನು ಮರಳು ಮಾಫಿಯಾದವರು ಅವೈಜ್ಞಾನಿಕ ಹಾಗೂ ಅಕ್ರಮವಾಗಿ ತೆಗೆದು ಲೂಟಿ ಮಾಡುವುದು ಕಂಡುಬರುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು. ಈ ಮೂಲಕ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು.
ಪ್ರಿಮ್ಸನ್ ಡಿಸೋಜ, ಬಂಗ್ರಕೂಳೂರು, ಸ್ಥಳೀಯ ನಿವಾಸಿ
ಬಂಗ್ರಕೂಳೂರು ಪ್ರದೇಶವು ಸಿಆರ್ಝೆಡ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಮರಳು ಗಣಿಗಾರಿಕೆ ನಡೆದಿದ್ದೇ ಆದಲ್ಲಿ ಇಷ್ಟರಲ್ಲಾಗಲೇ ದಾಳಿ ನಡೆಯುತ್ತಿತ್ತು. ಅಕ್ರಮ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ.
ನಿರಂಜನ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ
ಕೇಂದ್ರ ಸರಕಾರದ ಸಿಆರ್ಝೆಡ್ ಮಾರ್ಗಸೂಚಿಯಂತೆ ಮಳೆಗಾಲದಲ್ಲಿ ಮರಳು ಗಣಿಗಾರಿಕೆ ನಡೆಸಲು ಅವಕಾಶವಿಲ್ಲ. ಸದ್ಯ ಆ ಜಾಗದಲ್ಲಿ ಮರಳುಗಾರಿಕೆ ನಡೆಯುತ್ತಿದೆ ಎನ್ನುವುದಾದರೆ ಅದು ಅಕ್ರಮ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಶಶಿಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ
ಬಂಗ್ರಕೂಳೂರಿನಲ್ಲಿ ಮರಳುಗಾರಿಕೆಗೆ ಕೆಲವೆಡೆ ಅವಕಾಶವಿದೆ. ಆದಾಗ್ಯೂ, ಅಕ್ರಮ ಮರಳು ಗಣಿಗಾರಿಕೆ ನಡೆಯತ್ತಿದೆ ಎನ್ನುವುದಾದರೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ಗುರುಪ್ರಸಾದ್, ತಹಶೀಲ್ದಾರ್, ಮಂಗಳೂರು