ತಲೆತಲಾಂತರದಿಂದ ಪರಿಸರಸ್ನೇಹಿ ಗಣೇಶ ವಿಗ್ರಹ ತಯಾರಿ
ಅಮೆರಿಕದಲ್ಲಿನ ಭಕ್ತರಿಂದಲೂ ಬೇಡಿಕೆ
ಕೋವಿಡ್ ಮಾರ್ಗಸೂಚಿ ಪಾಲಿಸಿ ಮೂರ್ತಿ ನಿರ್ಮಾಣ
ಮಂಗಳೂರು, ಸೆ.10: ಶತಮಾನಗಳಿಂದ ನಿರಂತರವಾಗಿ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿಸುವ ಕಾರ್ಯದಲ್ಲಿ ಮಂಗಳೂರಿನ ಕುಟುಂಬವೊಂದು ತೊಡಗಿದೆ. ಈ ಕುಟುಂಬದ ನಾಲ್ಕನೇ ತಲೆಮಾರು ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ಮಂಗಳೂರಿನ ಮಣ್ಣಗುಡ್ಡೆಯ ಮೋಹನ್ ರಾವ್ ಎಂಬವರು ಶತಮಾನಕ್ಕೂ ಅಧಿಕ ಸಮಯದಿಂದ ಗಣಪನ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಳಿಕ ಅವರ ಮೂವರು ಮಕ್ಕಳು ಈ ಮೂರ್ತಿ ತಯಾರಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದೀಗ ಅವರ ಮಕ್ಕಳು, ಮೊಮ್ಮಕ್ಕಳ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಈ ಕುಟುಂಬ ತಯಾರಿಸುವ ಗಣೇಶ ಮೂರ್ತಿಗಳು ದೂರದ ಅಮೆರಿಕದ ಭಕ್ತರಿಂದಲೂಆರಾಧನೆಗೊಳ್ಳುತ್ತಿವೆ. ಅಮೆರಿಕದ ಕ್ಯಾಲಿಫೋರ್ನಿ ಯಾದ ಸ್ಯಾನ್ ಜೋಸ್ನಲ್ಲಿರುವ ಪ್ರಸನ್ನ ಗಣಪತಿ ದೇವಳದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಇಲ್ಲಿಂದ ಹೋದ ಗಣಪ ಪ್ರತಿಷ್ಠಾಪನೆಗೊಂಡು ಆರಾಧನೆಗೊಳ್ಳುತ್ತದೆ. ನಗರದ ಮುಲ್ಕಿ ಮೂಲದ ಪಾಂಡುರಂಗ ಶರ್ಮ ಎಂಬವರು ಈ ಗಣಪನ ಮೂರ್ತಿಯನ್ನು ಆರಾಧನೆ ಮಾಡುತ್ತಿದ್ದು, 24 ವರ್ಷಗಳಿಂದಲೂ ಇಲ್ಲಿಂದಲೇ ಗಣಪನ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಾರೆ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕ ರಾಮಚಂದ್ರ ರಾವ್.
ಕೊರೋನ ಸಂಕಷ್ಟದಿಂದ ವಿಮಾನಯಾನದ ವ್ಯತ್ಯಯದ ನಡುವೆ ಈ ಬಾರಿ ಗಣಪನ ವಿಗ್ರಹ ಕೊಂಡೊಯ್ಯಲು ಬಹಳಷ್ಟು ಸಂಕಷ್ಟವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಜೂನ್ 30ರಂದು ಇಲ್ಲಿಂದ ರವಾನೆಯಾಗಿದೆ. ವಿಮಾನದ ಮೂಲಕ ಪಾಂಡುರಂಗ ಶರ್ಮ ಅವರು ಇಲ್ಲಿಂದ ಗಣಪನ ವಿಗ್ರಹವನ್ನು ಕೊಂಡೊಯ್ದಿದ್ದಾರೆ. ಅಲ್ಲಿ ಈ ಗಣಪ ಒಂದು ವಾರಗಳ ಕಾಲ ಪ್ರಸನ್ನ ಗಣಪತಿ ದೇವಳದಲ್ಲಿ ಪೂಜಿಸಲ್ಪಟ್ಟು ಅದೇ ದೇವಳದಲ್ಲಿ ಜಲಸ್ತಂಭನಗೊಳ್ಳುತ್ತದೆ ಎನ್ನುತ್ತಾರೆ ಅವರು.
ಕೇರಳದ ಕಾಸರಗೋಡು ಕುಂಬಳೆಗೂ ಇಲ್ಲಿಂದಲೇ ಗಣೇಶನ ಮೂರ್ತಿ ಹೋಗುತ್ತದೆ. ಕೊರೋನ ಸಂಕಷ್ಟದ ನಡುವೆಯೂ ಈ ಬಾರಿ ಸಾರ್ವಜನಿಕ ಗಣೇಶೋತ್ಸವದ ಮೂರ್ತಿ, ಮನೆಯಲ್ಲಿ ಕೂರಿಸುವ ಸಣ್ಣ ಗಣೇಶ ಮೂರ್ತಿ ಸೇರಿ ಸುಮಾರು 230 ಮೂರ್ತಿಗಳನ್ನು ಕುಟುಂಬ ತಯಾರಿಸಿದೆ. ಗಣೇಶನ ವಿಗ್ರಹ ತಯಾರಿಕೆಗೆ ಅವಶ್ಯಕತೆ ಇರುವ ಆವೆಮಣ್ಣು ನಗರದಲ್ಲಿ ದೊರಕದಿದ್ದರೂ, ನಗರದ ಹೊರ ವಲಯದ ಗುರುಪುರ ಭಾಗದಿಂದ ಸುಮಾರು ಎರಡು ಲಾರಿ ಮಣ್ಣು ಖರೀದಿಸಲಾಗಿದೆ. ಅಲ್ಲದೆ ಪರಿಸರ ಸ್ನೇಹಿ ಗಣೇಶನ ವಿಗ್ರಹ ಮಾತ್ರ ತಯಾರಿಸುತ್ತಿದ್ದು, ಯಾವುದೇ ರೀತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಪರಿಸರ ಮಾರಕ ಬಣ್ಣವನ್ನು ಬಳಸುತ್ತಿಲ್ಲ ಎನ್ನುತ್ತಾರೆ ರಾಮಚಂದ್ರ ರಾವ್.
ನಾಲ್ಕು ತಲೆಮಾರುಗಳಂದ ಗಣಪತಿಯ ಸೇವೆ ಮಾಡಿಕೊಂಡು ಬಂದಿದ್ದೇವೆ. ತಂದೆಯ ಕಾಲದಿಂದ ಆರಂಭವಾಗಿ ಸದ್ಯ ಮೊಮ್ಮಕ್ಕಳು ಸಹಿತ ಈ ಮಹತ್ಕಾರ್ಯದಲ್ಲಿ ತೊಡಗಿದ್ದೇವೆ. ಕೋವಿಡ್ ನಿಯಮಾವಳಿ ಪಾಲಿಸಿಯೇ ಮೂರ್ತಿ ತಯಾರಿಸಲಾಗಿದೆ. ಭಕ್ತರು ಇಲ್ಲಿಂದ ಮೂರ್ತಿ ತೆಗೆದುಕೊಂಡು ಹೋಗುವಾಗಲೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
ರಾಮಚಂದ್ರ ರಾವ್, ಗಣೇಶ ಮೂರ್ತಿ ತಯಾರಕ, ಮಣ್ಣಗುಡ್ಡೆ, ಮಂಗಳೂರು