ದಿಲ್ಲಿ: ಮಳೆ ನೀರಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದ ರೈತ ನಾಯಕ ರಾಕೇಶ್ ಟಿಕಾಯತ್
photo: PTI
ಗಾಝಿಯಾಬಾದ್: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ತಮ್ಮ ಬೆಂಬಲಿಗರೊಂದಿಗೆ ದಿಲ್ಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಝಿಪುರದಲ್ಲಿ ಜಲಾವೃತವಾದ ಫ್ಲೈ ಓವರ್ ಬಳಿ ಧರಣಿ ನಡೆಸಿದರು.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಿರಂತರವಾಗಿ ಸುರಿದ ಭಾರೀ ಭಾರೀ ಮಳೆಯಿಂದಾಗಿ ಹಲವೆಡೆ ನೀರು ನುಗ್ಗಿದ್ದು ತಗ್ಗು-ಪ್ರದೇಶಗಳು ಜಲಾವೃತವಾಗಿವೆ. ನವೆಂಬರ್ನಿಂದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳು ಗಡಿ ಪ್ರದೇಶದಲ್ಲಿ ನಿರ್ಮಿಸಿದ್ದ ಹಲವು ಡೇರೆಗಳು, ಲಾಂಗರ್ಗಳು ಹಾನಿಯಾಗಿವೆ.
ಶನಿವಾರ, ದಿಲ್ಲಿ-ಎನ್ಸಿಆರ್ನಲ್ಲಿ ಭಾರೀ ಮಳೆಯಾಗುತ್ತಿದ್ದಂತೆ ಗಾಝಿಪುರದ ಫ್ಲೈ ಓವರ್ ಪ್ರತಿಭಟನಾಕಾರರ ಉಪಸ್ಥಿತಿಯಿಂದಾಗಿ ಬ್ಲಾಕ್ ಆಗಿತ್ತು.
"ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ನೀರು ತುಂಬಿದ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನಾಸ್ಥಳದಿಂದ ದಿಲ್ಲಿಯ ಕಡೆಗೆ ಹೋಗುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಗಮನಿಸಲಿಲ್ಲ. ಈಗ ಪ್ರತಿಭಟನೆ ನಡೆಸುತ್ತಿರುವ ರೈತರು ಎಲ್ಲಾ ಮೂರು ಋತುಗಳನ್ನು (ಚಳಿಗಾಲ, ಬೇಸಿಗೆ ಹಾಗೂ ಮಳೆಗಾಲ) ನೋಡಿದ್ದಾರೆ. ರೈತರು ಈಗ ಯಾವುದಕ್ಕೂ ಹೆದರುವಂತಿಲ್ಲ" ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಹೇಳಿದರು.