ಸುಲಿಗೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ
ಉಡುಪಿ, ಸೆ.12: ಒಂದು ವರ್ಷಗಳ ಹಿಂದೆ ಮಣಿಪಾಲ ಹಾಗೂ ಉಡುಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಸೆ.11ರಂದು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪ್ಪಿನಂಗಡಿ ಸುಬ್ಮಹ್ಮಣ್ಯ ಕ್ರಾಸ್ ಬಳಿಯ ನಿವಾಸಿ ಮುಹಮ್ಮದ್ ಮುಕ್ಸೀನ್ (29) ಬಂಧಿತ ಆರೋಪಿ. 2020ರ ಸೆ.19ರಂದು ಮುಂಜಾನೆ ಮಣಿಪಾಲ ಹಾಗೂ ಉಡುಪಿ ಪೊಲೀಸ್ ಠಾಣೆಯ ಹಲವು ಕಡೆಗಳಲ್ಲಿ ಬೈಕ್ ಸವಾರರಿಗೆ ಹಲ್ಲೆ ನಡೆಸಿ, ಹಣ ಮತ್ತು ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ಮುಕ್ಸೀನ್ ಬಂಧನಕ್ಕಾಗಿ ಪೊಲೀಸರು ನಿರಂತರವಾಗಿ ಯತ್ನಿಸಿ ಇದೀಗ ಯಶಸ್ವಿಯಾಗಿದ್ದಾರೆ. ಈತನ ವಿರುದ್ಧ ಬಂಟ್ವಾಳ, ಉಪ್ಪಿನಂಗಡಿ, ಬೆಳ್ಳಾರೆ, ಪಣಂಬೂರು, ಹಾಸನ ಜಿಲ್ಲೆಯ ಸಕಲೇಶಪುರ, ಬೆಂಗಳೂರಿನ ಆರ್. ಟಿ.ನಗರ, ಉಡುಪಿ ಜಿಲ್ಲೆಯ ಉಡುಪಿ ನಗರ, ಮಣಿಪಾಲ ಪೊಲೀಸ್ ಠಾಣೆ ಗಳಲ್ಲಿ ಸುಮಾರು 20ಕ್ಕೂ ಅಧಿಕ ಕಳ್ಳತನ ಮತ್ತು ಸುಲಿಗೆ ಪ್ರಕರಣಗಳು ದಾಖಲಾಗಿವೆ.
ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ್ಚಂದ್ರ ಡಿವೈಎಸ್ಪಿ ಸುಧಾಕರ್ ನಾಯ್ಕಿ ಮಾರ್ಗದರ್ಶನದಲ್ಲಿ ಮಣಿಪಾಲ ನಿರೀಕ್ಷಕ ಮಂಜುನಾಥ್ ಎಂ., ಎಸ್ಸೈಗಳಾದ ರಾಜಶೇಖರ್ ವಂದಲಿ, ಸುಧಾಕರ್ ತೋನ್ಸೆ, ಎಎಸ್ಸೈ ಶೈಲೇಶ್ ಕುಮಾರ್, ಸಿಬ್ಬಂದಿ ಪ್ರಸನ್ನ, ಇಮ್ರಾನ್, ತೋಮ್ಸನ್, ಅಬ್ದುಲ್ ರಜಾಕ್, ಸುರೇಶ್, ಸಲ್ಮಾನ್ ಖಾನ್, ಲೋಕೇಶ್, ಸುದೀಪ್, ಆದರ್ಶ ಈ ಕಾರ್ಯಾಚರಣೆ ನಡೆಸಿದ್ದಾರೆ.