ಶಿವಮೊಗ್ಗ: ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಗಾಜಿನ ಚೂರು ನುಂಗಿದ ಆರೋಪಿ!
ಶಿವಮೊಗ್ಗ, ಸೆ.15: ಪ್ರಕರಣವೊಂದಕ್ಕೆ ಸಂಬಂಧಿಸಿ ವಾರಂಟ್ ಕೊಡಲು ತೆರಳಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪಿಯೊಬ್ಬ ಬಳಿಕ ಗಾಜಿನ ಚೂರುಗಳನ್ನು ನುಂಗಿದ ಘಟನೆ ವಿನೋಬ ನಗರದ ಶುಭಮಂಗಳ ಸಮುದಾಯ ಭವನದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ರೂಪೇಶ್ ಗಾಜಿನ ಚೂರು ನುಂಗಿದ ಆರೋಪಿಯಾಗಿದ್ದಾನೆ. ಈತನಿಂದ ತಳ್ಳಾಲ್ಪಟ್ಟಿದ್ದರಿಂದ ಚರಂಡಿಗೆ ಬಿದ್ದ ವಿನೋಬ ನಗರ ಠಾಣೆ ಸಿಬ್ಬಂದಿ ಮಂಜುನಾಥ್ (34) ಎಂಬವರ ತಲೆಗೆ ಗಾಯಗಳಾಗಿವೆ. ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ವಿವರ: ಪ್ರಕರಣವೊಂದಕ್ಕೆ ಸಂಬಂಧಿಸಿ ರೂಪೇಶ್ ವಿರುದ್ಧ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿನೋಬ ನಗರ ಠಾಣೆ ಸಿಬ್ಬಂದಿ ಮಂಜುನಾಥ್ ಅವರು ಇಂದು ಬೆಳಗ್ಗೆ ರೂಪೇಶ್ ಗೆ ವಾರಂಟ್ ನೀಡಲು ತೆರಳಿದ್ದರು. ಶುಭಮಂಗಳ ಕಲ್ಯಾಣ ಮಂಟಪ ಬಳಿ ಪೊಲೀಸ್ ಸಿಬ್ಬಂದಿಯನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ರೂಪೇಶ್, ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರನ್ನು ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಮಂಜುನಾಥ್ ಪಕ್ಕದ ಚರಂಡಿಗೆ ಬಿದ್ದಿದ್ದು, ಅವರ ತಲೆಗೆ ಗಾಯವಾಗಿ ರಕ್ತ ಸೋರಲಾಂಭಿಸಿದೆ. ಇದನ್ನು ಕಂಡು ಹೆದರಿದ ರೂಪೇಶ್ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಗಾಜನ್ನು ಒಡೆದು ನುಂಗಿದನೆನ್ನಲಾಗಿದೆ. ಬಳಿಕ ಆತ ಕೂಡಾ ಅಲ್ಲೇ ಕುಸಿದು ಬಿದ್ದಿದ್ದಾನೆ.
ಕೂಡಲೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರಿಗೆ ಚಿಕಿತ್ಸೆ ನೀಡಿ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಗಾಜು ನುಂಗಿರುವ ರೂಪೇಶ್ ಗೆ ಸ್ಕ್ಯಾನಿಂಗ್ ಮಾಡಲಾಗಿದೆ.
ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ವಿನೋಬನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.