ಮುಖ್ಯಮಂತ್ರಿಗೆ ಬೆದರಿಕೆ ಪ್ರಕರಣ: ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಸಹಿತ ನಾಲ್ವರಿಗೆ ಜಾಮೀನು
ಮಂಗಳೂರು, ಸೆ.22: ನಗರದ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ, ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸೇರಿದಂತೆ ನಾಲ್ವರಿಗೆ ಮಂಗಳೂರು 2ನೇ ಜೆಎಂಎಫ್ಸಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಸೆ.18ರಂದು ಸುದ್ದಿಗೋಷ್ಠಿಯಲ್ಲಿ ಧರ್ಮೇಂದ್ರ ಮೈಸೂರಿನ ನಂಜನಗೂಡು ಸಮೀಪದ ದೇವಸ್ಥಾನ ಧ್ವಂಸ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ವಿರುದ್ಧ ಬೆದರಿಕೆ ಹಾಕಿದ್ದ. ಅಲ್ಲದೆ, ಹಿಂದೂ ಮಹಾಸಭಾ ಪಕ್ಷದ ಸ್ವಘೋಷಿತ ನಾಯಕ ಎಂದು ಹೇಳಿಕೊಂಡು ಅಸಂಬದ್ಧ ಹೇಳಿಕೆ ನೀಡಿದ್ದಾರೆ ಎಂದು ಎಂಟು ಮಂದಿ ವಿರುದ್ಧ ಡಾ.ಲೋಹಿತ್ ಕುಮಾರ್ ಸುವರ್ಣ ಎಂಬವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದರು.
ಧರ್ಮೇಂದ್ರನನ್ನು ರವಿವಾರ ಬಂಧಿಸಲಾಗಿತ್ತು. ಉಳಿದ ಮೂವರನ್ನು ಮಂಗಳವಾರ ಬಂಧಿಸಲಾಗಿತ್ತು. ಧರ್ಮೇಂದ್ರಗೆ ಸೆ.22ರವರೆಗೆ ಎರಡು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾದರೆ, ಇತರ ಆರೋಪಿಗಳಾದ ರಾಜೇಶ್ ಪವಿತ್ರನ್, ಪ್ರೇಮ್ ಪೊಳಲಿ ಹಾಗೂ ಸಂದೀಪ್ ಶೆಟ್ಟಿಗೆ ಮಂಗಳವಾರ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸದ್ಯ ನಾಲ್ವರೂ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.