ಕ್ಲಾಸ್ನಲ್ಲಿ ಪುಟಾಣಿ ಮಕ್ಕಳೊಂದಿಗೆ ಹಾಡಿ ಕುಣಿದ ಉಡುಪಿ ಡಿಡಿಪಿಐ
ಹೊಸ ಹುರುಪಿನೊಂದಿಗೆ ಪ್ರಾರಂಭಗೊಂಡ ಪ್ರಾಥಮಿಕ ಶಾಲಾ ತರಗತಿಗಳು
ಉಡುಪಿ, ಅ.25: ರಾಜ್ಯಾದ್ಯಂತ ಕೊರೋನ ಸೋಂಕಿನ ತೀವ್ರತೆ ಕಡಿಮೆಯಾಗುತಿದ್ದಂತೆ ಇಂದಿನಿಂದ ಒಂದನೇ ತರಗತಿಯಿಂದ ಐದನೇ ತರಗತಿಯ ವರೆಗಿನ ಪ್ರಾಥಮಿಕ ಶಾಲೆಗಳೂ ಒಂದೂವರೆ ವರ್ಷದ ಬಳಿಕ ಮಕ್ಕಳಿಗಾಗಿ ಬಾಗಿಲು ತೆರೆದುಕೊಂಡಿವೆ.
ಇಂದು ಬೆಳಗಿನಿಂದ ಶಾಲಾ ವಠಾರಗಳಲ್ಲಿ ಮಕ್ಕಳ ಕೇಕೆ, ಕಲರವ, ಗೌಜಿ-ಗದ್ದಲಗಳು ವಿವಿಧ ರೂಪದಲ್ಲಿ ಪ್ರಕಟಗೊಂಡವು. ಮಕ್ಕಳಲ್ಲಿ ಹೊಸ ಹುರುಪು ಲವಲವಿಕೆ ಕಂಡುಬರುತ್ತಿತ್ತು. ಈ ನಡುವೆ ಸ್ವತಹ ಹಲವು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಯನ್ನು ಖುದ್ದಾಗಿ ಅವಲೋಕಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ)ಎನ್.ಎಚ್.ನಾಗೂರ, ಪುಟಾಣಿ ಮಕ್ಕಳೊಂದಿಗೆ ಹಾಡಿ ಕುಣಿದ ಘಟನೆಯೂ ನಡೆದಿದೆ.
ಬೆಳಗ್ಗೆ ಉಡುಪಿ ನಗರದ ವಳಕಾಡು ನಾರ್ತ್ ಶಾಲೆಗೆ ಭೇಟಿ ನೀಡಿದ ವೇಳೆ ಅವರು ಒಂದನೇ ತರಗತಿಯ ಮಕ್ಕಳೊಂದಿಗೆ ಪಠ್ಯದಲ್ಲಿರುವ ಪದ್ಯವೊಂದನ್ನು ಮಕ್ಕಳಿಗೆ ಕಲಿಸಿದರು. ಮಕ್ಕಳ ಜೊತೆ ಅವರೂ ಹಾಡಿ ಕುಣಿದರು. ಒಟ್ಟಿನಲ್ಲಿ ಸುಧೀರ್ಘ ಕಾಲದ ಬಳಿಕ ಶಾಲೆ ಪ್ರಾರಂಭಗೊಂಡಿದ್ದು, ಶಾಲೆಯ ಮಕ್ಕಳು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಅಧಿಕಾರಿಗಳಲ್ಲೂ ಹೊಸ ಹುರುಪು ಕಂಡುಬಂತು.
ಹೆಚ್ಚಿನ ಶಾಲೆಗಳಲ್ಲಿ ಒಪ್ಪಿಗೆ ಪತ್ರಗಳ ಜೊತೆಗೆ ಸ್ವತಹ ಪೋಷಕರೇ ಮಕ್ಕಳನ್ನು ಶಾಲೆಗಳಿಗೆ ಕರೆತಂದು ಬಿಡುತ್ತಿರುವುದು ಕಂಡುಬಂತು. ಕೊರೋನ ಮಾರ್ಗದರ್ಶಿ ಸೂತ್ರಗಳನ್ನು ಶಾಲೆಗಳು ಎಷ್ಟರ ಮಟ್ಟಿಗೆ ಪಾಲಿಸುತ್ತಿವೆ ಎಂಬುದನ್ನು ಅರಿಯಲು ಹೆಚ್ಚಿನ ಪೋಷಕರು ಶಾಲೆಗಳಿಗೆ ಆಗಮಿಸಿದ್ದರು.
ಇಲಾಖೆಯ ಅಧಿಕಾರಿಗಳೂ ದಿನವಿಡೀ ಹಲವು ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ತೆರಳಿ ವ್ಯವಸ್ಥೆಗಳನ್ನು ಅವಲೋಕಿಸಿ ದರು. ಶಿಕ್ಷಕರು ಪಾಠ ಮಾಡುವ ಸಂದರ್ಭ ತರಗತಿಯಲ್ಲಿ ಇದ್ದು ಪರಿಶೀಲನೆ ನಡೆಸಿದರು. ಹೀಗೆ ವಳಕಾಡು ಶಾಲೆಯ ಒಂದನೇ ತರಗತಿಗೆ ಭೇಟಿ ನೀಡಿದ ವೇಳೆ ಅವರು ಮಕ್ಕಳಿಗೆ ತಾವೇ ಪದ್ಯ ಕಲಿಸಿ ಕುಣಿದು ತೋರಿಸಿದರು.
ಎಲ್ಲರಲ್ಲೂ ಹೊಸ ಹುರುಪು
ಉಡುಪಿ ಜಿಲ್ಲೆಯಲ್ಲಿ ಎಲ್ಲಾ 249 ಶಾಲೆಗಳು ಹೊಸ ಹುರುಪಿನೊಂದಿಗೆ ಪ್ರಾರಂಭಗೊಂಡಿವೆ. ಶಿಕ್ಷಕರೂ ಹುಮ್ಮಸ್ಸಿನಲ್ಲಿದ್ದು, ಉತ್ಸಾಹದಿಂದಲೇ ಪಾಠ ಪ್ರಾರಂಭಿಸಿದ್ದಾರೆ. ಸುಮಾರು 35 ಸಾವಿರ ವಿದ್ಯಾರ್ಥಿಗಳಿದ್ದು, ನಾನು ಈವರೆಗೆ 3-4 ಶಾಲೆಗಳಿಗೆ ಭೇಟಿ ಕೊಟ್ಟಿದ್ದು, ಎಲ್ಲಾ ಕಡೆ ಮಕ್ಕಳು ಬಹಳ ಉತ್ಸುಕತೆಯಿಂದ ಶಾಲೆಗೆ ಬರುತ್ತಿದ್ದಾರೆ ಎಂದು ಡಿಡಿಪಿಐ ನಾಗೂರ ಈ ಸಂದರ್ಭದಲ್ಲಿ ಖುಷಿಯಿಂದ, ಹೆಮ್ಮೆಯಿಂದ ನುಡಿದರು.
ಮಕ್ಕಳ ಖುಷಿ ಕಣ್ಣಲ್ಲಿ ಕಂಡಿದ್ದೇನೆ. ಮೊಬೈಲ್ನ ಗೋಳು ದೂರಾಯಿತು. ಮುಖಾಮುಖಿ ಕ್ಲಾಸ್ಗಳು ಆರಂಭವಾಗಿರುವುದರಿಂದ ಮಕ್ಕಳಿಗೆ ಬಹಳ ಖುಷಿ ಯಾಗುತ್ತಿದೆ. ಶಿಕ್ಷಕರು ಕೂಡ ಸುರಕ್ಷತಾ ಅಂತರ, ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಬಳಸಿ ಪಾಠಗಳನ್ನು ಶುರುಮಾಡಿದ್ದಾರೆ ಎಂದವರು ವಿವರಿಸಿದರು.
ಆತಂಕ ಬೇಡ: ಒಂದು ವಾರಗಳ ಕಾಲ ಮುಂಜಾನೆಯಿಂದ ಮಧ್ಯಾಹ್ನ ದವರೆಗೆ ಮಾತ್ರ ಕ್ಲಾಸುಗಳು ನಡೆಯುತ್ತವೆ. ಆನಂತರ ದಿನಪೂರ್ತಿ ಕ್ಲಾಸ್ ಮಾಡಲು ಆದೇಶ ಸರಕಾರದಿಂದ ಬಂದಿದೆ. ಉಡುಪಿ ಜಿಲ್ಲೆಯ ಬೇರೆಬೇರೆ ತಾಲೂಕುಗಳಿಗೆ ಭೇಟಿ ಕೊಟ್ಟಿದ್ದೇನೆ. ಶಿಕ್ಷಕರ ಜೊತೆ ಪೋಷಕರ ಜೊತೆ ಸಭೆಗಳನ್ನು ಮಾಡಿದ್ದೇನೆ. ಎಲ್ಲರೂ ಶಾಲೆ ಆರಂಭಿಸಿ ಎಂಬ ಉತ್ಸುಕತೆಯನ್ನು ತೋರಿಸಿದ ಹಿನ್ನೆಲೆಯಲ್ಲಿ ಸರಕಾರಕ್ಕೆ ವರದಿ ಕೊಟ್ಟಿದ್ದೇನೆ. ಹೀಗಾಗಿ ಪೋಷಕರಿಗೆ ಯಾವುದೇ ಭಯ, ಆತಂಕ ಬೇಡ. ಮಕ್ಕಳನ್ನು ನಿರಾತಂಕವಾಗಿ ಶಾಲೆಗೆ ಕಳುಹಿಸಿ ಎಂದವರು ನುಡಿದರು.
ರಾಜ್ಯ ಸರಕಾರದ ಆದೇಶವನ್ನು ಎಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳು ಪಾಲಿಸಬೇಕು. ನವೆಂಬರ್ ಒಂದರಿಂದ ಶಾಲೆಗಳು ಪೂರ್ತಿ ದಿನ ನಡೆಯಲಿವೆ. ಪೋಷಕರು ಯಾರೂ ಆತಂಕಪಡುವ ಅಗತ್ಯ ಇಲ್ಲ. ಎರಡು ಡೋಸ್ ಆದ ಶಿಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರ್ವ ಸಿದ್ಧತೆಗಳು ಆಗಿವೆ. ಮಾಸ್ಕ್, ಸುರಕ್ಷತಾ ಅಂತರ, ಸ್ಯಾನಿಟೈಸ್ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ ಎಂದು ಡಿಡಿಪಿಐ ಎಚ್ ಎನ್ ನಾಗೂರ, ಮಕ್ಕಳ ಪೋಷಕರಿಗೆ ಭರವಸೆ ನೀಡಿದ್ದಾರೆ.