ಉಡುಪಿಯ 1191 ಅಂಗನವಾಡಿ ಕೇಂದ್ರಗಳು ಪ್ರಾರಂಭ
ಪುಟಾಣಿಗಳಿಗೆ ಚಾಕೋಲೇಟ್, ಬಲೂನು ನೀಡಿ ಸ್ವಾಗತಿಸಿದ ಡಿಸಿ, ಸಿಇಓ
ಉಡುಪಿ, ನ.8: ಕೊರೋನದಿಂದ ಸುಮಾರು ಒಂದೂವರೆ ವರ್ಷಗಳ ಕಾಲ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಇಂದಿನಿಂದ ಆರಂಭಗೊಂಡಿದ್ದು, ಜಿಲ್ಲೆ ಯಾದ್ಯಂತ 1191 ಅಂಗನವಾಡಿ ಕೇಂದ್ರಗಳಲ್ಲಿ ಪುಟಾಣಿ ಮಕ್ಕಳ ಕಲರವ ಕೇಳಿಬಂದವು.
ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಮಕ್ಕಳ ಸುರಕ್ಷತೆಯ ಹಿನ್ನೆಲೆ ಯಲ್ಲಿ ಎಲ್ಲ ಅಂಗನವಾಡಿ ನೌಕರರು ಕೋವಿಡ್ ಲಸಿಕೆಯನ್ನು ಪಡೆದುೊಳ್ಳು ವಂತೆ ಕ್ರಮ ವಹಿಸಲಾಗಿದೆ. ಬಹುತೇಕ ಕೇಂದ್ರಗಳಲ್ಲಿ ತಳೀರು ತೋರಣಗಳಿಂದ ಶೃಂಗರಿಸಿ ಮಕ್ಕಳಿಗೆ ಆರತಿ ಬೆಳಗಿ, ಸಿಹಿ ಹಂಚಿ ಹೂವು ನೀಡಿ ಸ್ವಾಗತಿಸ ಲಾಯಿತು. ಮಕ್ಕಳು ಈ ವಾತಾವರಣ ಕಂಡು ಸಂಭ್ರಮ ಪಟ್ಟರು.
ಚಾಕೋಲೆಟ್ ನೀಡಿದ ಡಿಸಿ: ಉಡುಪಿ ಕಡಿಯಾಳಿಯ ಅಂಗನವಾಡಿ ಕೇಂದ್ರದಲ್ಲಿ ಬಲೂನು, ತಳಿರು ತೋರಣಗಳಿಂದ ಸಿದ್ಧಪಡಿಸಿದ್ದ ಅಂಗನವಾಡಿ ಕೇಂದ್ರದ ಪ್ರಾರಂಭೋತ್ಸವದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಭಾಗವಹಿಸಿ, ಕೇಂದ್ರಕ್ಕೆ ಆಗಮಿಸಿದ, ಮಕ್ಕಳಿಗೆ ಚಾಕೋಲೇಟ್, ಬಲೂನ್, ಗುಲಾಬಿ ಹೂ ನೀಡಿ ಪ್ರೀತಿಯಿಂದ ಸ್ವಾಗತಿಸಿದರು.
ನಗರಸಭೆ ಸದಸ್ಯೆ ಗೀತಾ ಶೇಟ್, ಬಾಲ ವಿಕಾಸ ಸಮಿತಿಯ ಸದಸ್ಯರು, ಪೋಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಸುಮಲತಾ ವಂದಿಸಿದರು.
ಕಾಜಾರಗುತ್ತು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಮಕ್ಕಳಿಗೆ ಆರತಿ ಬೆಳಗಿಸಿ, ಪುಷ್ಪವೃಷ್ಠಿ ಸುರಿಸುವುದರ ಮೂಲಕ ನಲ್ಮೆಯ ಸ್ವಾಗತ ಕೋರಲಾಯಿತು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ, ಕೋಡಿಬೆಟ್ಟು ಗ್ರಾಪಂ ಅಧ್ಯಕ್ಷೆ ಆಶಾ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಪ್ರಭು, ಪಿಡಿಓ ರೇವತಿ ಮೊದಲಾದವರು ಉಪಸ್ಥಿತರಿದ್ದರು.
ಆಟದ ಸಾಮಗ್ರಿಗಳ ಆಕರ್ಷಣೆ: ಮಕ್ಕಳ ಸ್ವಾಗತ ಹಾಗೂ ಆಕರ್ಷಣೆಗಾಗಿ ಹಲವು ಅಂಗನವಾಡಿ ಕೇಂದ್ರಗಳಲ್ಲಿ ವಿಶಿಷ್ಟ ಪ್ರಯತ್ನಗಳನ್ನು ಮಾಡಲಾಗಿತ್ತು. ಬಾಳೆ ಕಂಬ, ಬಣ್ಣ ಬಣ್ಣದ ಬಲೂನ್, ತಳಿರು ತೋರಣಗಳಿಂದ ಅಲಂಕಾರ ಮಾಡಿದರೆ, ಕೆಲವು ಕಡೆಗಳಲ್ಲಿ ಮಕ್ಕಳಿಗೆ ಬೇಕಾದ ಗೊಂಬೆ, ಆಟದ ಸಾಮಾಗ್ರಿ ಗಳನ್ನು ಇಟ್ಟು ಸ್ವಾಗತಿಸಲಾಯಿತು.
ಕಾಪು ತಾಲೂಕಿನ ಕುಂಜೂರು ದುರ್ಗಾ ನಗರದ ಅಂಗನವಾಡಿ ಕೇಂದ್ರವನ್ನು ಶೃಂಗರಿಸಿ ಮಕ್ಕಳಿಗೆ ಚಾಕಲೇಟ್, ಕಂಪಾಸ್ ಬಾಕ್ಸ್ಗಳನ್ನು ವಿತರಿಸಿ, ಗುಲಾಬಿ ಹೂವು ನೀಡಿ ಆರತಿ ಬೆಳಗಿಸಿ ಸ್ವಾಗತಿಸಲಾಯಿತು. ಕಟ್ಕೆರೆ ಹಾಗೂ ನೇರಂಬಳ್ಳಿ ಕೇಂದ್ರಗಳಲ್ಲಿ ಕುಂದಾಪುರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಯೋಜನಾ ಧಿಕಾರಿ ಶ್ವೇತಾ ಹಾಗೂ ಮೇಲ್ವಿಚಾರಕಿ ಸುಜಯಾ ಮಕ್ಕಳಿಗೆ ಆರತಿ ಬೆಳಗಿ, ಸಿಹಿ ಹಂಚಿ, ಹೂವು ನೀಡಿ ಪ್ರೀತಿಯಿಂದ ಬರಮಾಡಿ ಕೊಂಡರು.
''ಅಂಗನವಾಡಿ ಕೇಂದ್ರದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಮಕ್ಕಳು ಮತ್ತು ಪೋಷಕರು ಕೇಂದ್ರಕ್ಕೆ ಉತ್ಸಾಹದಿಂದ ಆಗಮಿಸುತ್ತಿದ್ದು, ಸ್ಥಳೀಯರಿಂದ ಉತ್ತಮ ಸಹಕಾರ ದೊರೆತಿದೆ. ಜಿಲ್ಲೆಯ ಎಲ್ಲ 1191 ಅಂಗನವಾಡಿಗಳು ಆರಂಭ ಗೊಂಡಿದ್ದು, ಎಲ್ಲಾ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಗೆ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೋಷಕರು ಯಾವುದೇ ಆತಂಕವಿಲ್ಲದೆ ಪ್ರತಿದಿನ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು''.
-ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ