ಮಂಗಳೂರು; ಕ್ರೆಡಿಟ್ ಕಾರ್ಡ್ ಹಣ ವಂಚನೆ ಪ್ರಕರಣ: ಟಿಬೆಟಿಯನ್ ಪ್ರಜೆಗಳಿಬ್ಬರ ಬಂಧನ
ಮಂಗಳೂರು, ನ.11: ಕ್ರೆಡಿಟ್ ಕಾರ್ಡ್ನಿಂದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸೆಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಇಬ್ಬರು ಟಿಬೆಟಿಯನ್ ಪ್ರಜೆಗಳನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತೆ ಮೂರು ಮಂದಿ ನೇರವಾಗಿ ಭಾಗಿಯಾಗಿರುವವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬಂಧಿತರನ್ನು ಉತ್ತರ ಕನ್ನಡದ ಮುಂಡುಗೋಡು ಟಿಬೆಟಿಯನ್ ಕಾಲನಿಯ ಶರಗಡನ್ ಮೊನಸ್ಟ್ರಿಯ ಲೋಬಸಂಗ್ ಸಂಗೈ (24) ಹಾಗೂ ದಕಪ ಪುಂದೇ (40) ಎಂದು ಗುರುತಿಸಲಾಗಿದೆ.
ಬಂಧಿತ ವ್ಯಕ್ತಿಗಳು ಅತ್ತಾವರ ವೈದ್ಯನಾಥ ನಗರದ ಸಿ.ಡಿ. ಅಲೆಕ್ಸಾಂಡರ್ ಎಂಬವರಿಗೆ ಸೇರಿದ ಎಸ್ಬಿಐ ಕ್ರೆಡಿಟ್ ಕಾರ್ಡ್ನಿಂದ 1.12 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಅಲೆಕ್ಸಾಂಡರ್ ಅವರು ತಾನು ಮೂರು ವರ್ಷಗಳಿಂದ ಉಪಯೋಗಿಸುತ್ತಿದ್ದ ಕ್ರೆಡಿಟ್ ಕಾರ್ಡ್ನ ವಾರ್ಷಿಕ ಶುಲ್ಕ ಹೆಚ್ಚಳವಾಗಿದ್ದರಿದ ಕಾರ್ಡನ್ನು ಬ್ಯಾಂಕ್ಗೆ ವಾಪಸ್ ಮಾಡಿದ್ದರು. 27-03-2021ರಂದು ಇವರ ಖಾತೆಯಿಂದ 1.12 ಲಕ್ಷ ರೂ. ವರ್ಗಾವಣೆಯಾಗಿರುವುದು ಸ್ಟೇಟ್ಮೆಂಟ್ನಿಂದ ತಿಳಿದು ಬಂದಿದ್ದು ಈ ಬಗ್ಗೆ ಸೈಪರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನ. 10ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಮಂಗಳೂರು 7ನೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಹಣ ವಂಚನೆಗೆ ನಿಷೇಧಿತ ಚೀನಾ ಆ್ಯಪ್ ಬಳಕೆ!
ಈ ಬಗ್ಗೆ ತನಿಖೆ ನಡೆಸಿದ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಚೀನಾದ ಆ್ಯಪ್ಗಳಾದ ವಿಚಾಟ್ ಹಾಗೂ ರೆಡ್ಪ್ಯಾಕ್ನ ಮೂಲಕ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಮೊಬಿಕ್ವಿಕ್ ವಾಲೆಟ್ ಆ್ಯಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿದ್ದ ಎರಡು ಖಾತೆಗಳಿಗೆ ಈ ಕ್ರೆಡಿಟ್ ಕಾರ್ಡ್ ಹಣ ವರ್ಗಾಯಿಸಲಾಗಿತ್ತು. ಮಾತ್ರವಲ್ಲದೆ ಉತ್ತರ ಕನ್ನಡ ತಟ್ಟಿ ಹಳ್ಳಿಯಲ್ಲಿರುವ ಕೆನರಾ ಡಿಸಿಸಿ ಬ್ಯಾಂಕ್ನ ಖಾತೆದಾರನಾದ ಲೋಬ್ ಸ್ಯಾಂಗ್ ಸ್ಯಾಂಗಿಸ್ ಎಂಬಾತನ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆಯ ವೇಳೆ ಕಂಡು ಬಂದಿದೆ.
''ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಂತಹ ವಂಚನೆ ಪ್ರಕರಣಗಳು ಇನ್ನಷ್ಟು ನಡೆದಿರುವ ಸಾಧ್ಯತೆಯ ಕುರಿತಂತೆಯೂ ತನಿಖೆ ನಡೆಯುತ್ತಿದೆ. ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ಬ್ಯಾಂಕ್ಗೆ ಸರೆಂಡರ್ ಮಾಡಿದ್ದ ವೇಳೆ ಈ ಪ್ರಕರಣ ನಡೆದಿರುವುದರಿಂದ ಬ್ಯಾಂಕ್ನ ಪಾಲುದಾರಿಕೆಯ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ''.
- ಎನ್. ಶಶಿಕುಮಾರ್, ಪೊಲೀಸ್ ಕಮಿನರ್, ಮಂಗಳೂರು