ತಮ್ಮ ಬರಹಗಳಿಂದ ಬ್ರಿಟಿಷರ ನಿದ್ದೆಗೆಡೆಸಿದ್ದ ಮೌಲಾನ ಅಝಾದ್: ಕಾದಿರ್ ಮೀರಾ ಪಟೇಲ್
ಭಟ್ಕಳ: ರಾಷ್ಟ್ರೀಯ ಶಿಕ್ಷಣ ದಿನ-2021 ಕಾರ್ಯಕ್ರಮ
ಭಟ್ಕಳ: ಮೌಲಾನ ಅಬುಲ್ ಕಲಾಂ ಆಝಾದ್ ತಮ್ಮ ಅಲ್ ಹಿಲಾಲ್ ಪತ್ರಿಕೆಯ ಮೊನಚು ಬರಹಗಳ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ್ದರು ಎಂದು ನ್ಯೂಶಮ್ಸ್ ಸ್ಕೂಲ್ ನ ಅಧ್ಯಕ್ಷ ಕಾದಿರ್ ಮೀರಾ ಪಟೇಲ್ ಹೇಳಿದರು.
ಅವರು ಗುರುವಾರ ಇಲ್ಲಿನ ಸುಲ್ತಾನ್ ಸ್ಟ್ರೀಟ್ ನಲ್ಲಿರುವ ದಾವತ್ ಸೆಂಟರ್ ನಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್, ಮೌಲಾನ ಅಬುಲ್ ಕಲಾಂ ಅಝಾದ್ ರ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನ-2021 ಕಾರ್ಯಕ್ರಮದಲ್ಲಿ ಮೌಲಾನ ಆಝಾದ್ ರ ಬದುಕು ಮತ್ತು ಸಾಧನೆ ಕುರಿತಂತೆ ಮಾತನಾಡಿದರು.
ಮೌಲಾನ ಆಝಾದ್ ರು ತಮ್ಮ ಭಾಷಣ ಮತ್ತು ಲೇಖನಗಳ ಮೂಲಕ ಇಡೀ ದೇಶದಾದ್ಯಂತ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದ್ದರು. ತಮ್ಮ ಹಕ್ಕುಗಳನ್ನು ಪಡೆಯಲು ಬ್ರಿಟಿಷರಿಂದ ಭಿಕ್ಷೆ ಬೇಡಬೇಕಾಗಿಲ್ಲ ಎಂಬ ದೋರಣೆಯನ್ನು ಹೊಂದಿದ್ದರು. ಹಿಂದೂ ಮತ್ತು ಮುಸ್ಲಿಂ ಐಕ್ಯತೆ ಅವರ ಮಂತ್ರವಾಗಿತ್ತು ಎಂದು ಅವರು ಹೇಳೀದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ, ಮೌಲಾನ ಅಬುಲ್ ಕಲಾಂ ಆಝಾದ್ ಆದರ್ಶ ವ್ಯಕ್ತಿತ್ವದ ಇತಿಹಾಸ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ದೇಶದಲ್ಲಿ ಐಐಟಿ ಸ್ಥಾಪನೆ ಮಾಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದರು. ಶಿಕ್ಷಣ ಎಂದರೆ ಕೇವಲ ಓದುವುದಷ್ಟೇ ಅಲ್ಲ, ಇತರರಿಂದ ತಿಳಿದುಕೊಳ್ಳುವುದು ಎಂಬ ದ್ಯೇಯ ಹೊಂದಿದ್ದರು. ಇವರೊಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಗಾಂಧಿಯೊಂದಿಗೆ ಉತ್ತಮ ಬಾಂಧವ್ಯ, ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದರು. ದೇಶದಲ್ಲಿ ಹಿಂದೂ ಮುಸ್ಲಿಮ್ ಐಕ್ಯತೆಗಾಗಿ ಶ್ರಮಿಸಿದ್ದಾರೆ ಎಂದರು.
ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭಟ್ಕಳ ತಾಲೂಕು ಮಾಧ್ಯಮಿಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಬ್ಬಿರ್ ಆಹಮದ್ ದಫೆದಾರ್ ಮೌಲಾನ ಆಜಾದ್ ಕುರಿತಂತೆ ಮಾತನಾಡಿದರು.
ಐಟಾ ರಾಜ್ಯ ಕಾರ್ಯದರ್ಶಿ ಯಾಸೀನ್ ಭೀಕ್ಬಾ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಇಕ್ರಾ ಪ್ರೌಢಾಶಾಲೆ ಮುರುಢೇಶ್ವರ ಇದರ ಮುಖ್ಯಾಧ್ಯಾಪಕ ನಯೀಮುಲ್ ಹಖ್ ಕಾರ್ಯಕ್ರಮ ನಿರೂಪಿಸಿದರು. ಐಟಾ ಉ.ಕ ಜಿಲ್ಲಾಧ್ಯಕ್ಷ ಅಲಿ ಮನೆಗಾರ್ ಧನ್ಯವಾದ ಅರ್ಪಿಸಿದರು.
ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಸರ್ಕಾರಿ ನೌಕರರ ಸಂಘ ರಾಜ್ಯಪರಿಷತ್ ಸದಸ್ಯ ಪ್ರಕಾಶ ಶೇಟ್ ಶಿರಾಲಿ, ಐಟಾ ಭಟ್ಕಳ ತಾಲೂಕಾಧ್ಯಕ್ಷ ಇಮ್ರಾನ್ ಮುಲ್ಲಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಮುಹಮ್ಮದ್ ಸಾದಿಖ್ ಶೇಖ್ ರನ್ನು “ಸೈಯ್ಯದ್ ಅಬ್ದುಲ್ಲಾ ಲಂಕಾ ಮೆಮೊರಿಯಲ್ ಐಡಿಯಲ್ ಟೀಚರ್ಸ್ ಅವಾರ್ಡ್ ಹಾಗೂ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಲ್ಲಿ 40ಕ್ಕೂ ಹೆಚ್ಚು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮುಹಮ್ಮದ್ ಸೈಫುಲ್ಲಾ ಸರಗಿರೊ ಅವರ ಜೀವಮಾನ ಸಾಧನೆಗಾಗಿ ಸೈಯ್ಯದ್ ಅಬ್ದುಲ್ಲಾ ಲಂಕಾ ಲೈಫ್ ಅಚಿವ್ಮೆಂಟ್ ಅವಾರ್ಡ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು.