ಉಡುಪಿ ಜಿಲ್ಲಾಸ್ಪತ್ರೆಗಳ ಡಯಾಲಿಸೀಸ್ ಘಟಕಗಳ ಅವ್ಯವಸ್ಥೆ ವಿರೋಧಿಸಿ ಅಹೋರಾತ್ರಿ ಧರಣಿ ಆರಂಭ
ಉಡುಪಿ, ನ.16: ರಾಜ್ಯದ 23 ಜಿಲ್ಲೆಗಳ 122 ಸರಕಾರಿ ಆಸ್ಪತ್ರೆಯ ಡಯಾ ಲಿಸೀಸ್ ಘಟಕಗಳಲ್ಲಿ ಇರುವ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸುವಂತೆ ಹಾಗೂ ಸಿಬ್ಬಂದಿಗೆ ಬಾಕಿ ಇರುವ ವೇತನವನ್ನು ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ಯುವಶಕ್ತಿ ಕರ್ನಾಟಕ ಇಂದಿನಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅನಿರ್ದಿಷ್ಟಾವಧಿ ಹಾಗೂ ಅಹೋರಾತ್ರಿ ಧರಣಿಯನ್ನು ಆರಂಭಿಸಿದೆ.
23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಡಯಾಲಿಸೀಸ್ ಘಟಕದ ಸೇವೆಯ ಗುತ್ತಿಗೆ ಯನ್ನು ಬಿಆರ್ಎಸ್ ಕಂಪೆನಿ ವಹಿಸಿಕೊಂಡಿದೆ. ನಷ್ಟದಲ್ಲಿರುವ ಬಿಆರ್ಎಸ್ ಕಂಪೆನಿಯು ಘಟಕದ ಸಾವಿರಾರು ಸಿಬ್ಬಂದಿಗಳಿಗೆ ಕಳೆದ ಐದು ತಿಂಗಳುಗಳಿಂದ ವೇತನ ಪಾವತಿ ಮಾಡಿಲ್ಲ. ಅಲ್ಲದೆ ಕೇಂದ್ರಗಳಿಗೆ ಅಗತ್ಯ ಇರುವ ಸಾಮಾಗ್ರಿಗಳು ಖಾಲಿಯಾಗಿವೆ. ಇದರಿಂದ ಈ ಘಟಕಗಳನ್ನು ನಂಬಿರುವ ಬಡವರು ತೀವ್ರ ತೊಂದರೆ ಅನುಭವಿಸುಂತಾಗಿದೆ ಎಂದು ಕರವೇ ಜಿಲ್ಲಾಧ್ಯ್ಷ ಅನ್ಸಾರ್ ಅಹ್ಮದ್ ಆರೋಪಿಸಿದ್ದಾರೆ.
ಯುವಶಕ್ತಿ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್ ಮಾತನಾಡಿ, ಆಡಳಿತ ಮತ್ತು ವಿರೋಧ ಪಕ್ಷಗಳು ಕೇವಲ ಧರ್ಮ, ಜಾತಿಗಳಿಗೆ ಸೀಮಿತ ವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಬಡವರ ಪರವಾಗಿ ಯಾರು ಕೂಡ ಮಾತನಾಡುತ್ತಿಲ್ಲ. ಬಿಆರ್ಎಸ್ ಆಸ್ಪತ್ರೆಯಲ್ಲಿ ಯಾವುದೇ ರೀತಿ ಅನ್ಯಾಯ ಆದರೂ ಮುಂದೆ ನಿಂತು ಧರಣಿ ಮಾಡುತ್ತೇನೆ ಎಂದು ಹೇಳಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಧರಣಿಯಲ್ಲಿ ಕರವೇ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಯೋಗೀಶ್ ಕುತ್ಪಾಡಿ, ಸುಧೀರ್ ಪೂಜಾರಿ, ಗಣೇಶ್ ಕುಮಾರ್ ಮೊದಲಾದ ವರು ಉಪಸ್ಥಿತರಿದ್ದರು.
ಬೂಟ್ಪಾಲೀಶ್ ಪ್ರತಿಭಟನೆ
ಬೆಳಗ್ಗೆಯಿಂದ ರಾತ್ರಿಯವರೆಗೂ ಧರಣಿ ಮುಂದುವರೆದಿದ್ದು, ನ.17ರಂದು ಬೆಳಗ್ಗೆ 10.30ಕ್ಕೆ ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಬೂಟು ಪಾಲೀಶ್ ಮಾಡುವ ವಿನೂತನ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಬೂಟ್ ಪಾಲೀಶ್ನಿಂದ ಬಂದ ಹಣವನ್ನು ಸರಕಾರಕ್ಕೆ ದೇಣಿಗೆ ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.