ಪಕ್ಷಿಕೆರೆ: ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಿಸಿ ಅರ್ಥಪೂರ್ಣ ಮಕ್ಕಳ ದಿನಾಚರಣೆ
ಮಂಗಳೂರು, ನ.16: ಇಲ್ಲಿನ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕಾಡು ಅಂಗನವಾಡಿಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಮೂಲಕ ವಿಶಿಷ್ಠ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಪ್ರತೀ ಮಗುವಿಗೂ ಮನೆಯೇ ಮೊದಲ ಪಾಠಶಾಲೆಯಾದರೂ ಮಕ್ಕಳು ತಮ್ಮ ಜೀವನದ ಹೆಚ್ಚಿನ ಸಂಸ್ಕಾರವನ್ನು ಅಂಗನಾವಾಡಿಯಿಂದಲೇ ಕಲಿಯಲು ಆರಂಭಿಸುತ್ತಾರೆ. ಆದ್ದರಿಂದ ಅಂಗನವಾಡಿಗಳು ನಮ್ಮ ಜೀವನದ ಅತ್ಯಮೂಲ್ಯ ದಿನಗಳಲ್ಲಿ ಒಂದು ಎಂದು ನುಡಿದರು.
ಅಂಗನವಾಡಿಗೆ ಬರುವ ಮಕ್ಕಳನ್ನು ಸರಕಾರದ ಆದೇಶದಂತೆ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಶಿಕ್ಷಕಿಯರ ಮಾಹಿತಿಯಂತೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಕಳುಹಿಸಬೇಕೆಂದು ಹೆತ್ತವರಿಗೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಗ್ರಾ.ಪಂ. ಸದಸ್ಯ ಮಯ್ಯದ್ದಿ, ಅಂಗನವಾಡಿಗಳು ಸುಭದ್ರ ಭವ್ಯ ಭಾರತ ನಿರ್ಮಾಣದ ಶಕ್ತಿ ಕೇಂದ್ರಗಳು ಎಂದು ಅಭಿಪ್ರಾಯಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಳನ್ನು ಅಂಗನವಾಡಿಯ ಮಕ್ಕಳೇ ಗುಲಾಬಿ ಹೂವುಗಳನ್ನು ನೀಡಿ ಸ್ವಾಗತಿಸಿ ಮೆಚ್ಚುಗೆಗೆ ಪಾತ್ರರಾದರು. ವೇದಿಕೆಯಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿಗಾರ್, ಜಾಕ್ಸನ್, ಶಶಿ ಸುರೇಶ್, ಅಂಗನವಾಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶೋಭಾ, ಆಶಾಕಾರ್ಯಕರ್ತೆ ಶೋಭಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಕ್ಕಳ ಹತ್ತವರು, ಗ್ರಾಮಸ್ಥರು, ಅಂಗನವಾಡಿಯ ಮಕ್ಕಳು ಭಾಗವಹಿಸಿದ್ದರು.
ಅಂಗನಾವಾಡಿ ಶಿಕ್ಷಿಯರಾದ ಸವಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಹೇಮಾವತಿ ವಂದಿಸಿದರು.