ಸಂವಿಧಾನಕ್ಕೆ ಆಪಾಯವಾದಲ್ಲಿ ದೇಶದ ಭವಿಷ್ಯಕ್ಕೆ ಅಪಾಯ-ಭಾಸ್ಕರ್ ಪ್ರಸಾದ್
'ಸಂವಿಧಾನದ ಅನಿವಾರ್ಯತೆ' ವಿಚಾರ ವಿನಿಮಯ
ಪುತ್ತೂರು : ಪ್ರಸ್ತುತ ಸಂವಿಧಾನ ವಿರೋಧಿಗಳಲ್ಲಿ ದೇಶದ ಆಡಳಿತವಿದ್ದು, ಈ ದೇಶದ್ರೋಹಿಗಳ ಆಡಳಿತದಲ್ಲಿ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನಕ್ಕೆ ಅಪಾಯವಾದಲ್ಲಿ ಭಾರತರ ಮುಂದಿನ ಭವಿಷ್ಯಕ್ಕೆ ಅಪಾಯವಿದೆ. ಇದನ್ನು ತಡೆಯಲು ಪಕ್ಷ ಎಜೆಂಡಾವನ್ನು ಬದಿಗಿಟ್ಟು ದೇಶದ ರಕ್ಷಣೆಯ ಪ್ರಮಾಣ ಮಾಡಬೇಕಾಗಿದೆ ಎಂದು ರಾಜ್ಯ ದಲಿತ ಮುಖಂಡ ಭಾಸ್ಕರ್ ಪ್ರಸಾದ್ ತಿಳಿಸಿದರು.
ಅವರು ಗುರುವಾರ ಪುತ್ತೂರಿನ ರೋಟರಿ ಟ್ರಸ್ಟ್ ಹಾಲ್ನಲ್ಲಿ ನಡೆದ `ಸಂವಿಧಾನದ ಅನಿವಾರ್ಯತೆ ವಿಚಾರ ವಿನಿಮಯ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ಉಳಿಸಿಕೊಳ್ಳುವುದು ಸವಾಲಿನ ಪ್ರಶ್ನೆಯಾಗಿದೆ. ದಲಿತರು ಮತ್ತು ಶ್ರೂದ್ರರಿಗೆ ತ್ರಿಶೂಲ ದೀಕ್ಷೆ ನೀಡಿ ಕೊಲೆಗಡುಕತನದ ಮನಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ತ್ರಿಶೂಲ ದೀಕ್ಷೆ ನೀಡಿದವರಲ್ಲಿ ಸಂಘ ಪರಿವಾರದವರ ಮಕ್ಕಳಿಲ್ಲ. ಅವರೆಲ್ಲಾ ಐಟಿ ಬಿಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತ್ರಿಶೂಲ ದೀಕ್ಷೆ ನೀಡಿ ಹಿಂಸೆಯನ್ನು ಪ್ರಚೋದಿಸುತ್ತಿರುವವರ ನಡುವೆ ಸಂವಿಧಾನ ದೀಕ್ಷೆಯನ್ನು ನೀಡಿ ಸಂವಿದಾನ ನೀಡಿರುವ ದೇಶದ ಭಾತೃತ್ವ, ಸಮಾನತೆ, ಐಕ್ಯತೆಗಳನ್ನು ಉಳಿಸಿಕೊಳ್ಳಬೇಕಾಗಿದೆ.
ಮತಾಂತರ ತಡೆ, ಎನ್ಆರ್ಸಿ, ಸಿಎಎ ಜಾರಿ ಇವೆಲ್ಲಾ ದೇಶವಿರೋಧಿ ಚಿಂತನೆಗಳಾಗಿದೆ. ಆಹಾರ ಪದ್ದತಿ, ಧರ್ಮ ದೇವರುಗಳ ಹೆಸರಿನಲ್ಲಿ ನಿರಂತರ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಹಿಂದಿನ ಅನಾಚರಣೆ ಸಂಪ್ರಾಯದ ಶಿಕ್ಷಣ ಪದ್ದತಿಯನ್ನು ಮತ್ತೆ ಮುನ್ನಲೆಗೆ ತರಲಾಗುತ್ತಿದೆ. ಇದರಿಂದಾಗಿ ಮುಂದಿನ 50 ವರ್ಷಗಳಲ್ಲಿ ದೇಶವು 2200 ವರ್ಷಗಳ ಹಿಂದಕ್ಕೆ ಹೋಗಲಿದೆ. ಸನಾತನವಾದಕ್ಕೆ ಕೊಂಡೊಯ್ಯುವುದೇ ನೂತನ ಶಿಕ್ಷಣ ಪದ್ದತಿಯ ಉದ್ದೇಶವಾಗಿದೆ. ಇವೆಲ್ಲಾ ಸಂವಿಧಾನಕ್ಕೆ ಬಗೆಯುವ ಅಪಚಾರವಾಗಿದ್ದು, ಸಂವಿಧಾನದ ಮೇಲೆ ನಡೆಸುವ ಅತ್ಯಾಚಾರವಾಗಿದೆ. ಸಂವಿಧಾನವೆಂದರೆ ಈ ದೇಶ, ದೇಶವೆಂದರೆ ಇಲ್ಲಿನ ಎಲ್ಲಾ ಜನರು, ಸಂವಿಧಾನ ವಿರೋಧಿಗಳು ದೇಶದ್ರೋಹಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಸಂವಿಧಾನ ರಕ್ಷಣೆಯ ಪ್ರಮಾಣದೊಂದಿಗೆ ಸಂವಿಧಾನದ ಆಶಯವನ್ನು ಕಾಪಾಡಿಕೊಂಡು ಬರಬೇಕು ಎಂದರು.
ಮುಖಂಡರಾದ ಆನಂದ ಮಿತ್ತಬೈಲು, ವಿಕ್ಟರ್ ಮಾರ್ಟಿಸ್, ಇಬ್ರಾಹಿಂ ಹಾಜಿ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.