ನ.21ರಂದು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಜನಜಾಗೃತಿ ಅಭಿಯಾನಕ್ಕೆ ಚಾಲನೆ
ಉಡುಪಿ, ನ.18: ಬೆಲೆ ಏರಿಕೆ ವಿರುದ್ಧ ಜನಜಾಗೃತಿ ಮೂಡಿಸುವ ಹಾಗೂ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ನ.21ರಂದು ಸಂಜೆ 5ಗಂಟೆಗೆ ಪಲಿಮಾರಿನಲ್ಲಿ ಚಾಲನೆ ನೀಡಲಾಗು ವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ವೆ ಯಿಂದ ಫಲಿಮಾರುವರೆಗೆ ಮೆರವಣಿಗೆ ನಡೆಸಿ, ಫಲಿಮಾರಿನಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಇದರಲ್ಲಿ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮೊದಲಾದವರು ಭಾಗವಹಿಸಲಿರುವರು ಎಂದರು.
75ಸಾವಿರ ಸದಸ್ಯತ್ವ ಗುರಿ: ನ.19ರಿಂದ ಉಡುಪಿ ಜಿಲ್ಲೆಯ 154 ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಸದಸ್ಯತ್ವ ನೊಂದಣಿ ಅಭಿಯಾನವು ಅಧಿಕೃತವಾಗಿ ಚಾಲನೆಗೊಳ್ಳಲಿದೆ ಎಂದು ಅವರು ತಿಳಿಸಿದರು.
2022ರ ಮಾ.31ರವರೆಗೆ ನಡೆಯುವ ಈ ಅಭಿಯಾನದ ಮೂಲಕ ಜಿಲ್ಲೆ ಯಲ್ಲಿ 70-75ಸಾವಿರ ಸದಸ್ಯತ್ವ ನೋಂದಣಿ ಮಾಡುವ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯ 10 ಬ್ಲಾಕ್ಗಳಿಂದ ತಲಾ ಕನಿಷ್ಠ 7000 ಸದಸ್ಯರ ನೋಂದಣಿ ಮಾಡಲಾಗುವುದು. ಇದರಲ್ಲಿ ಜಿಲ್ಲಾಧ್ಯಕ್ಷರು, ಜನಪ್ರತಿ ನಿಧಿಗಳು, ಮಾಜಿ ಸಚಿವರು, ಶಾಸಕರು ಕೂಡ ತೊಡಗಿಸಿಕೊಳ್ಳುವಂತೆ ಸೂಚನೆ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಭಾಸ್ಕರ ರಾವ್ ಕಿದಿಯೂರು, ಕುಶಲ್ ಶೆಟ್ಟಿ, ದಿನಕರ ಹೇರೂರು, ಪ್ರಶಾಂತ್ ಜತ್ತನ್ನ, ವಿಪಿನ್ಚಂದ್ರ ಪಾಲ್, ಹರಿಪ್ರಸಾದ್ ಶೆಟ್ಟಿ, ಸದಾಶಿವ, ರೋಶನ್ ಶೆಟ್ಟಿ ಉಪಸ್ಥಿತರಿದ್ದರು.