700 ರೈತರು ಮೃತಪಟ್ಟಿರುವುದಕ್ಕೆ ಟಿಕಾಯತ್ ಹೊಣೆ: ಬಿಜೆಪಿ ನಾಯಕ ಹರಿನಾರಾಯಣ ರಾಜ್ಭರ್
ಬಲ್ಲಿಯಾ (ಉತ್ತರಪ್ರದೇಶ), ಡಿ. 6: ಬಿಜೆಪಿ ನಾಯಕ ಹರಿನಾರಾಯಣ ರಾಜ್ಭರ್ ಅವರು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಅವರನ್ನು ‘ಭಯೋತ್ಪಾದಕ’ ಎಂದು ಕರೆಯುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ. ಅಲ್ಲದೇ, ಪ್ರತಿಭಟನೆಯ ವೇಳೆ ರೈತರು ಮೃತಪಟ್ಟಿರುವುದಕ್ಕೆ ಟಿಕಾಯತ್ ಹೊಣೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಕೃಷಿ ಕಾಯ್ದೆಯನ್ನು ಹಿಂದೆ ಪಡೆದಿರುವುದರಿಂದ ರೈತರಿಗೆ ನಷ್ಟ ಉಂಟಾಗಲಿದೆ ಹಾಗೂ ‘‘ಖಲಿಸ್ಥಾನಿ ಗೂಂಡಾ’’ಗಳಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಕಾಣಿಸಿಕೊಂಡಿರುವ ಈ ವೀಡಿಯೊದಲ್ಲಿ ಘೋಸಿ ಲೋಕಸಭಾದ ಮಾಜಿ ಸಂಸದ ಹರಿನಾರಾಯಣ ರಾಜ್ಭರ್ ಅವರು, ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) ವರಿಷ್ಠ ಓಂ ಪ್ರಕಾಶ್ ರಾಜ್ಭರ್ ಅವರು ‘‘ಮಾಫಿಯಾ ಮುಖ್ತಾರ್ ಅನ್ಸಾರಿ ಅವರ ಶೂಟರ್’’ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ನಡೆದ ಪ್ರತಿಟನೆಯ ಸಂದರ್ಭ 700 ರೈತರು ಮೃತಪಟ್ಟಿರುವುದಕ್ಕೆ ಟಿಕಾಯತ್ ಹೊಣೆ ಎಂದು ಅವರು ಹೇಳಿದರು. ಅಲ್ಲದೆ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಮೃತಪಟ್ಟ ರೈತರ ಕುಟುಂಬಿಕರಿಗೆ ಪರಿಹಾರ ನೀಡಲು ಅವರ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.