ಬಲವಂತದ ಕೋವಿಡ್ ಲಸಿಕೆ ಬೇಡ: ಮನಪಾಕ್ಕೆ ನಾಗರಿಕರ ಆಗ್ರಹ
ಮಂಗಳೂರು, ಡಿ.9: ನಗರದಲ್ಲಿ ಪಾಲಿಕೆ ಕಚೇರಿ ಸೇರಿದಂತೆ ಕೆಲವು ಕಡೆ ಪ್ರವೇಶ, ಭೇಟಿ ನೀಡುವ ಸಂದರ್ಭ ಕೋವಿಡ್ ಲಸಿಕೆ ಪ್ರಮಾಣ ಪತ್ರವಿಲ್ಲದೆ ಪ್ರವೇಶ ನಿರಾಕರಣೆ, ಲಸಿಕೆ ಪಡೆಯದವರಿಗೆ ಸ್ಥಳದಲ್ಲೇ ಲಸಿಕೆ ಹಾಕಿಸುವ ನಿಯಮ ಬಲವಂತದ್ದು ಹಾಗೂ ಅಸಂವಿಧಾನಿಕ ಎಂದು ಆಕ್ಷೇಪಿಸಿ ಮಂಗಳೂರಿನ ನಾಗರಿಕರ ಗುಂಪೊಂದು ಪಾಲಿಕೆ ಅಧಿಕಾರಿಗಳನ್ನು ಭೇಟಿ ಮಾಡಿ ವಿರೋಧ ವ್ಯಕ್ತಪಡಿಸಿದೆ.
ನಗರದಲ್ಲಿ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿರುವುದು ಅವೈಜ್ಞಾನಿಕ, ಅಮಾನವೀಯ ಹಾಗೂ ಕಾನೂನು ಬಾಹಿರ ಎಂದು ನಿನ್ನೆ ಪಾಲಿಕೆ ಆಯುಕ್ತ ಎನ್. ಅಕ್ಷಯ್ ಶ್ರೀಧರ್ ಹಾಗೂ ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ ಅವರನ್ನು ನಾಗರಿಕರ ಗುಂಪು ಆಗ್ರಹಿಸಿದೆ.
ಕೆಲವರಿಗೆ ಲಸಿಕೆಯಿಂದ ಅಲರ್ಜಿಯಾಗುವ ಸಾಧ್ಯತೆ ಇರುವುದರಿಂದ ಲಸಿಕೆ ಪಡೆಯಲು ಹಿಂದೇಟು ಹಾಕುವವರಿಗೆ ಬಲವಂತ ಪಡಿಸುವುದು ಸರಿಯಲ್ಲ ಎಂದೂ ಗುಂಪು ಅಧಿಕಾರಿಗಳಿಗೆ ಮನವರಿಕೆ ಮಾಡಿದೆ.
ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತರುವುದಾಗಿ ಪಾಲಿಕೆ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ನಾಗರಿಕರ ಗುಂಪು ತಿಳಿಸಿದೆ.