ಮಂಗಳೂರು: ದ್ವಿಚಕ್ರ ವಾಹನ ಕಳವು; ಆರೋಪಿಗಳ ಬಂಧನ
ಮಂಗಳೂರು, ಡಿ.10: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳವುಗೈದ ಇಬ್ಬರು ಆರೋಪಿಗಳನ್ನು ಬರ್ಕೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೈಕಂಪಾಡಿ ಸಮೀಪದ ಮೀನಕಳಿಯ ಸುಮಂತ್ ಬರ್ಮನ್ (19)ಮತ್ತು ಪುತ್ತೂರಿನ ಕೆಮ್ಮಿಂಜಿ ಗ್ರಾಮದ ತಾರಾನಾಥ ಸಾಲಿಯಾನ್ (26) ಬಂಧಿತ ಆರೋಪಿಗಳು. ಇವರಿಂದ ಎರಡು ದ್ವಿಚಕ್ರ ಮತ್ತು ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 75ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ನಗರದ ಬಲ್ಲಾಳ್ಬಾಗ್ ಪತ್ತುಮುಡಿ ಸಮೀಪದ ಗುಂಡಿಹೌಸ್ ಬಳಿಯ ನಿವಾಸಿ ಕೆ.ಪ್ರಕಾಶ್ ಎಂಬವರು ನ.22ರಂದು ತನ್ನ ದ್ವಿಚಕ್ರ ವಾಹನವನ್ನು ಮನೆಯ ಬಳಿ ಪಾರ್ಕ್ ಮಾಡಿದ್ದು, ಮರುದಿನ ಬೆಳಗ್ಗೆ ನೋಡಿದಾಗ ದ್ವಿಚಕ್ರ ವಾಹನ ಕಳವಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಕಾರ್ಯಾಚರಣೆ ನಡೆಸಿದಾಗ ಇಬ್ಬರು ಆರೋಪಿಗಳು ಕಳವುಗೈದ ದ್ವಿಚಕ್ರ ವಾಹನ ಸಮೇತ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಸುಮಂತ್ ಬರ್ಮನ್ ವಿರುದ್ದ ಕಾವೂರು, ಪಣಂಬೂರು, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಹಾಗೂ ತಾರಾನಾಥ ಸಾಲಿಯಾನ್ ವಿರುದ್ಧ ಮಂಗಳೂರು ಉತ್ತರ, ಸುರತ್ಕಲ್, ಉಳ್ಳಾಲ, ಮಂಗಳೂರು ದಕ್ಷಿಣ, ಮಂಗಳೂರು ಪೂರ್ವ ಹಾಗೂ ಪುತ್ತೂರು ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನ, ದರೋಡೆ, ಗಾಂಜಾ ಮಾರಾಟ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿತ್ತು.