ಉಡುಪಿ: ವಿಧಾನ ಪರಿಷತ್ ಚುನಾವಣೆ - ಏಳರಲ್ಲಿ ಮೂವರು ಶಾಸಕರಿಗೆ ಮಾತ್ರ ಮತದಾನದ ಅವಕಾಶ!
ಉಡುಪಿ, ಡಿ.10: ಉಡುಪಿ ಜಿಲ್ಲೆಯಲ್ಲಿ ಐದು ಮಂದಿ ವಿಧಾನಸಭಾ ಸದಸ್ಯರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ ಇವರಲ್ಲಿ ಮೂವರು ಮಾತ್ರ ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಉಳಿದ ನಾಲ್ಕು ಮಂದಿ ಮತದಾನ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ(ರಾಜಕೀಯ ರಹಿತ ಗ್ರಾಪಂ ಹೊರತಾದ) ಪದನಿಮಿತ್ತ ಸದಸ್ಯರಾಗಿದ್ದು, ಜಿಪಂ, ತಾಪಂ ಅವಧಿ ಮುಗಿದ ಕಾರಣ ಇವರಿಗೆ ಮತದಾನದ ಹಕ್ಕು ಇರಲಿಲ್ಲ. ಇವರಿಬ್ಬರು ಗ್ರಾಮೀಣ ಪ್ರದೇಶ ವಾಗಿರುವ ಕ್ರಮವಾಗಿ ಕೋಟತಟ್ಟು ಹಾಗೂ ಹಾಲಾಡಿ ಗ್ರಾಮಗಳ ಮತದಾರರಾಗಿದ್ದಾರೆ.
ತಾಪಂ, ಜಿಪಂ ಹಾಗೂ ಕಾಪು ಪುರಸಭೆ ಅಸ್ತಿತ್ವದಲ್ಲಿಲ್ಲದ ಕಾರಣ ಲಾಲಾಜಿ ಆರ್.ಮೆಂಡನ್ ಹಾಗೂ ತಾಪಂ ಜಿಪಂ ಅವಧಿ ಮುಗಿದ ಕಾರಣ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಕೂಡ ಮತದಾನ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ, ಉಡುಪಿ ನಗರಸಭೆ ಪದನಿಮಿತ್ತ ಸದಸ್ಯರಾದ ಹಿನ್ನೆಲೆಯಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಸುನೀಲ್ ಕುಮಾರ್, ಕೆ.ರಘುಪತಿ ಭಟ್ ಮತದಾನ ಮಾಡುವ ಹಕ್ಕು ಪಡೆದಿ ದ್ದಾರೆ. ಅದರಂತೆ ತಮ್ಮ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿನ ಮತದಾನ ಕೇಂದ್ರ ದಲ್ಲಿ ಇವರು ಇಂದು ವುತದಾನ ಹಕ್ಕನ್ನು ಚಲಾಯಿಸಿದರು.