ಉಳ್ಳಾಲ ಉರೂಸ್ ಎರಡು ತಿಂಗಳ ಅವಧಿಗೆ ಮುಂದೂಡಿಕೆ
ಉಳ್ಳಾಲ: ಡಿ.23ರಿಂದ ಆರಂಭಗೊಂಡು ಜನವರಿ 16ರವರೆಗೆ ನಡೆಯಬೇಕಿದ್ದ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಉರೂಸ್ ಜಿಲ್ಲಾಡಳಿತದ ಮನವಿಯ ಮೇರೆಗೆ ಎರಡು ತಿಂಗಳ ಅವಧಿಗೆ ಮುಂದೂಡಲಾಗಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಉರೂಸ್ ಹಿನ್ನೆಲೆಯಲ್ಲಿ ಆಡಳಿತ ಸಮಿತಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದು ಬಹುತೇಕ ವ್ಯವಸ್ಥೆಗಳು ಪೂರ್ಣಗೊಂಡಿದೆ. ಜನರೂ ದರ್ಗಾಕ್ಕೆ ಬರುತ್ತಿದ್ದು ಹರಕೆಯ ರೂಪದಲ್ಲಿ ನಗದು, ವಿವಿಧ ವಸ್ತುಗಳನ್ನು ನೀಡುತ್ತಿದ್ದು, ಆಡು, ಕುರಿಗಳು ಬಂದು ತಲುಪಿವೆ. ಆದರೆ ಒಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ ಗಡಿಭಾಗವಾದ ಮಹಾರಾಷ್ಟ್ರ, ಕೇರಳ ಮತ್ತು ತಮಿಳ್ನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಆರ್ಟಿಪಿಎಸ್ ಕಡ್ಡಾಯಗೊಳಿಸಲಾಗಿದ್ದು, ಇದೇ ವ್ಯವಸ್ಥೆಯಲ್ಲಿ ಉರೂಸ್ ನಡೆದರೆ ಹೊರರಾಜ್ಯಗಳ ಜನರು ಆಗಮಿಸಲು ಕಷ್ಟವಾಗಲಿದೆ. ಉರೂಸ್ ನಿಗದಿತ ದಿನದಲ್ಲೇ ನಡೆಯಬೇಕೆನ್ನುವ ನಿಯಮ ಇಲ್ಲದ ಕಾರಣ ಒಂದೆರೆಡು ತಿಂಗಳು ಮುಂದೂಡಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಯ ಮನವಿ ಹಿನ್ನೆಲೆಯಲ್ಲಿ ಶುಕ್ರವಾರ ಆಡಳಿತ ಸಮಿತಿ ಸಭೆ ಸೇರಿ ಎರಡು ತಿಂಗಳ ಮಟ್ಟಿಗೆ ಉರೂಸ್ ಮುಂದೂಡಲು ತೀರ್ಮಾನಿಸಿದ್ದು, ಅದರಂತೆ ಫೆಬ್ರವರಿಯಲ್ಲಿ ನಡೆಸಲು ಯೋಚಿಸಲಾಗಿದೆ. ಇದನ್ನು ಅರ್ಥೈಸಿಕೊಂಡು ಹೊರರಾಜ್ಯದಿಂದ ಬರಲು ಸಿದ್ಧರಾಗಿರುವ ಭಕ್ತರು, ತಮ್ಮ ಸಹಕಾರ ನೀಡಬೇಕು ಎಂದು ಪತ್ರಿಕಾ ಹೇಳಿಕೆಯ ಮೂಲಕ ರಶೀದ್ ಅವರು ಮನವಿ ಮಾಡಿದ್ದಾರೆ.