ಉಡುಪಿ: ಲೆಕ್ಕಪರಿಶೋಧಕರು, ಸಿಎ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ
ಉಡುಪಿ, ಡಿ.25: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆ ಹಾಗೂ ಉಡುಪಿ ಸಿಎ ವಿದ್ಯಾರ್ಥಿಗಳ ಸಂಘ (ಸಿಕಾಸ)ಗಳ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಶನಿವಾರ ಅಜ್ಜರಕಾಡು ಜಿಲ್ಲಾಸ್ಪತ್ರೆ ರಕ್ತನಿಧಿಯಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ನಾಗಭೂಷಣ್ ಉಡುಪ ಮಾತನಾಡಿ, ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರವು ದಾನಿಗಳ ಸಹಕಾರದಿಂದ ರಾಜ್ಯದಲ್ಲಿಯೇ ಪ್ರಥಮಾ ಸ್ಥಾನ ಗಳಿಸಿದೆ. ಸಿಎ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬ ಹಾಗು ವಿಶೇಷ ದಿನಗಳಲ್ಲಿ ಈ ರೀತಿಯ ಸೇವೆ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ರಕ್ತ ನಿಧಿ ಕೇಂದ್ರದ ಡಾ.ವೀಣಾ ಮಾತನಾಡಿ, ವಿದ್ಯಾರ್ಥಿ ಗಳು ಆಗಾಗ ರಕ್ತ ನೀಡುವುದರಿಂದ ಹೃದಯಾಘಾತ ಸಂಭವ ಹಾಗೂ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಯಿಂದ ಉತ್ತಮ ಅರೋಗ್ಯಕ್ಕೆ ಸಹಕಾರಿಯಾಗಲಿದೆ. ಅಲ್ಲದೆ ಇತರರ ಜೀವ ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಕೊರೋನ ಸಂದರ್ಭದಲ್ಲಿ ವಿಶೇಷ ಸೇವೆ ನೀಡಿದ ವೈದ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆಯ ಅಧ್ಯಕ್ಷೆ ಸಿಎ ಕವಿತಾ ಪೈ, ಕಾರ್ಯದರ್ಶಿ ಸಿಎ ಪ್ರದೀಪ್ ಜೋಗಿ, ಉಪಾಧ್ಯಕ್ಷ ಸಿಎ ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸಿಕಾಸ ಅಧ್ಯಕ್ಷ ಸಿಎ ನರಸಿಂಹ ನಾಯಕ್ ಸ್ವಾಗತಿಸಿದರು. ಸಿಕಾಸ ವಿದ್ಯಾರ್ಥಿ ಘಟಕದ ರೆಸಾ ತಸಲೀಂ ವಂದಿಸಿದರು. ಶ್ರೇಯಾ ಸಾಲಿಯಾನ್ ಕಾರ್ಯಕ್ರಮ ನಿರೊಪಿಸಿದರು. ಶಿಬಿರದಲ್ಲಿ 40ಕ್ಕೂ ಹೆಚ್ಚಿನ ಸಿಎ ವಿದ್ಯಾರ್ಥಿಗಳು ಹಾಗೂ ಲೆಕ್ಕ ಪರಿಶೋಧಕರು ಪಾಲ್ಗೊಂಡರು.