ಮಂಗಳೂರು; ಸಂಚರಿಸುವ ರೈಲುಗಳಲ್ಲಿ ಕಳ್ಳತನ: ಆರೋಪಿ ಸೆರೆ
ಮಂಗಳೂರು, ಡಿ.25: ಮಂಗಳೂರು-ಬೆಂಗಳೂರು ನಡುವೆ ರಾತ್ರಿ ಸಂಚರಿಸುವ ರೈಲುಗಳಲ್ಲಿ ಮೊಬೈಲ್ ಪೋನ್ ಮತ್ತು ಲೇಡಿಸ್ ಬ್ಯಾಗ್ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಳ್ಯ ಗಾಂಧಿನಗರದ ಅಬ್ದುಲ್ ಅಝೀಝ್ (19) ಎಂದು ಗುರುತಿಸಲಾಗಿದೆ. ಆರೋಪಿಯಿಂದ 1 ಟ್ಯಾಬ್, 11 ಮೊಬೈಲ್ ಪೋನ್ಗಳು, ಒಂದು ವ್ಯಾನಿಟಿ ಬ್ಯಾಗ್, ಪಾಸ್ಪೋರ್ಟ್ ಮತ್ತಿತರ ದಾಖಲಾತಿ ಸಹಿತ ಅಂದಾಜು 1.75 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನವಾಗಿದೆ.
ಮಂಗಳೂರು-ಬೆಂಗಳೂರು ನಡುವೆ ರಾತ್ರಿ ಸಂಚರಿಸುವ ರೈಲುಗಳಲ್ಲಿ ಕಳ್ಳತನ ನಡೆಯುತ್ತಿದ್ದ ಬಗ್ಗೆ ಕಳೆದ ಎರಡು ತಿಂಗಳು ಗಳಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಆರೋಪಿಗಳ ಪತ್ತೆಗಾಗಿ ರೈಲ್ವೆ ಪೊಲೀಸ್ನ ಎಡಿಜಿಪಿ ಭಾಸ್ಕರ ರಾವ್ರ ನಿರ್ದೇಶನದಂತೆ ಎಸ್ಪಿ ಡಿ.ಆರ್. ಸಿರಿಗೌರಿ ಮತ್ತು ಪ್ರಭಾರ ಪೊಲೀಸ್ ಉಪಾಧೀಕ್ಷಕ ಪ್ರಭಾಕರ್ರ ಮಾರ್ಗದರ್ಶನದಂತೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯ ನಿರೀಕ್ಷಕ ಮೋಹನ್ ಕೊಟ್ಟಾರಿ ತನಿಖಾ ತಂಡವನ್ನು ರಚಿಸಿ ರೈಲುಗಾಡಿಗಳಲ್ಲಿ ವಿಶೇಷ ಅಪರಾಧ ಪತ್ತೆದಳ ಸಿಬಂದಿಯನ್ನು ನೇಮಿಸಿದ್ದರು.
ಅದರಂತೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆರೋಪಿ ಅಬ್ದುಲ್ ಅಝೀಝ್ ನನ್ನು ಶನಿವಾರ ಬಂಧಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಈತ ಸುಮಾರು 2 ತಿಂಗಳಿನಿಂದ ಮಂಗಳೂರು-ಬೆಂಗಳೂರು ನಡುವೆ ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರು ಮಲಗಿದ್ದ ವೇಳೆ ಕಳ್ಳತನ ನಡೆಸುತ್ತಿದ್ದ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.