ವೇತನ ಅನುದಾನಕ್ಕೆ ತಡೆ ಆರೋಪ; ಪ್ರಯೋಗಾಲಯ ತಾಂತ್ರಿಕ ಅಧಿಕಾರಿಯಿಂದ ಹಕ್ಕೊತ್ತಾಯ ಧರಣಿ
ಮಂಗಳೂರು, ಜ.6: ಕೊರೋನ ಅವಧಿಯ ಆರು ತಿಂಗಳ ವೇತನ ಅನುದಾನಕ್ಕೆ ವೈದ್ಯಾಧಿಕಾರಿ ತಡೆ ಒಡ್ಡಿದ್ದಾರೆ ಎಂದು ಆರೋಪಿಸಿ ಮಂಗಳೂರು ತಾಲೂಕಿನ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಜಲೀಲ್ ಇಬ್ರಾಹಿಂ ಎಂಬವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಕ್ಕೊತ್ತಾಯ ಧರಣಿ ನಡೆಸಿದರು.
ಕಳೆದ ಕೊರೋನ ಅವಧಿಯಲ್ಲಿ ವಾರಿಯರ್ಸ್ ಆಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ವಿನಾ ಕಾರಣ ವೇತನವನ್ನು ವೈದ್ಯಾಧಿಕಾರಿ ತಡೆ ಹಿಡಿದಿದ್ದಾರೆ. ಇದರಿಂದ ನನಗೆ ಕುಟುಂಬ ಪೋಷಿಸುವುದು ಕಷ್ಟವಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದೇನೆ. ಅವರು ವೇತನ ನೀಡುವಂತೆ ಸೂಚಿಸಿದರೂ ವೈದ್ಯಾಧಿಕಾರಿ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಆದ್ದರಿಂದ ನಿರುಪಾಯವಾಗಿ ಹಕ್ಕೊತ್ತಾಯ ಧರಣಿ ನಡೆಸುತ್ತಿದ್ದೇನೆ ಎಂದು ಜಲೀಲ್ ಇಬ್ರಾಹಿಂ ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಮಧ್ಯಸ್ಥಿಕೆಯಲ್ಲಿ ಒಂದು ವಾರದಲ್ಲಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.