ಕಾಂ. ನಾಗೇಶ್ ಕುಮಾರ್ ಸಂಸ್ಮರಣಾ ದಿನಾಚರಣೆ
ಮಂಗಳೂರು, ಜ.9: ವಿದ್ಯಾರ್ಥಿ ಯುವಜನ ಚಳುವಳಿಯ ಮೂಲಕ ದ.ಕ.ಜಿಲ್ಲೆಯಲ್ಲಿ ಎಡಪಂಥೀಯ ಚಳುವಳಿಗೆ ಅವಿಶ್ರಾಂತವಾಗಿ ಶ್ರಮಿಸಿದ ಕಾಮ್ರೆಡ್ ನಾಗೇಶ್ ಕುಮಾರ್ರ 12ನೇ ವರ್ಷದ ಸಂಸ್ಮರಣಾ ದಿನವನ್ನು ನಗರದ ವಿಕಾಸ ಕಚೇರಿಯಲ್ಲಿ ರವಿವಾರ ಆಚರಿಸಲಾಯಿತು.
ಈ ಸಂದರ್ಭ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿ ಎಳೆಯ ಪ್ರಾಯದಲ್ಲೇ ವಿದ್ಯಾರ್ಥಿ ಚಳುವಳಿಯ ಮೂಲಕ ಬೆಳೆದು ಬಂದ ಕಾಂ.ನಾಗೇಶ್ ಕುಮಾರ್ ವಿಮಾ ನೌಕರರಾಗಿ ವಿಮಾ ರಂಗದ ಉಳಿವಿಗಾಗಿ ನಡೆದ ವಿವಿಧ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ವಿಮಾ ನೌಕರರ ಸಂಘಟನೆಯಲ್ಲಿಯೂ ಪ್ರಮುಖ ನಾಯಕರಾಗಿದ್ದರು. ಎಂತಹ ಸಂಕಷ್ಟದ ಕಾಲದಲ್ಲೂ ಚಳುವಳಿಯ ಹಿರಿಯ-ಕಿರಿಯ ಸಂಗಾತಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿ ತೆರೆಮರೆಯಲ್ಲಿದ್ದು ಕೊಂಡು ಚಳುವಳಿಯ ಮುನ್ನಡೆಗೆ ಸಹಕರಿಸಿದ್ದರು ಎಂದರು.
ಈ ಸಂದರ್ಭ ಸಿಪಿಎಂ ಜಿಲ್ಲಾ ನಾಯಕರಾದ ಕೆ.ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುಕುಮಾರ್, ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ನಾಯಕರಾದ ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ಎಸ್ಎಫ್ಐ ಮಾಜಿ ನಾಯಕ ಚರಣ್ ಶೆಟ್ಟಿ, ಅಖಿಲ ಭಾರತ ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ, ರಾಮಚಂದ್ರ ಬಬ್ಬುಕಟ್ಟೆ, ಕೆ.ಪಿ. ಸತೀಶನ್, ಶಾಲಿನಿ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಬಿ.ಎಂ. ಮಾಧವ, ಯುವ ವಕೀಲರಾದ ಸುನಂದ ಕೊಂಚಾಡಿ, ರಿಝ್ವಾನ್ ಉಪಸ್ಥಿತರಿದ್ದರು.