‘ಉಡುಪಿ: ತೀವ್ರ ಕೋವಿಡ್ ಕಾರಣದಿಂದ ನೇರ ಐಸಿಯು ಅಗತ್ಯತೆ ಪ್ರಾರಂಭಗೊಂಡಿದೆ’
ಎಚ್ಚರ ವಹಿಸಲು ವೈದ್ಯರ ಕರೆ
ಉಡುಪಿ, ಜ.10: ತೀವ್ರ ಕೋವಿಡ್-19ರ ಕಾರಣದಿಂದ ನೇರ ಐಸಿಯು ಅವಶ್ಯಕತೆ ಉಡುಪಿಯಲ್ಲಿ ಪ್ರಾರಂಭ ಗೊಂಡಿದೆ. ಹೀಗಾಗಿ ಕೋವಿಡ್-19ರ ಕುರಿತಂತೆ ಜನತೆ ಜಾಗೃತೆ ವಹಿಸುವಂತೆ ನಗರದ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಕೋವಿಡ್ನ ತಜ್ಞರಲ್ಲಿ ಒಬ್ಬರಾದ ಡಾ.ಶಶಿಕಿರಣ ಉಮಾಕಾಂತ್ ಎಚ್ಚರಿಸಿದ್ದಾರೆ.
ಒಮೈಕ್ರಾನ್ ಎಲ್ಲರೂ ಭಾವಿಸುವಂತೆ ‘ಸೌಮ್ಯ’ ಅಲ್ಲ. ಇದು ‘ಕಡಿಮೆ’ ಜನರಲ್ಲಿ ತೀವ್ರ ಕೋವಿಡ್-19 ಉಂಟು ಮಾಡಬಲ್ಲದು ಎಂದು ಅವರು ಫೇಸ್ಬುಕ್ನ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ನಿಂದ ನೇರವಾಗಿ ಐಸಿಯುಗೆ ಸೇರುವವರ ಸಂಖ್ಯೆ ಹೆಚ್ಚತೊಡಗಿದೆ ಎಂದು ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಡಾ.ಶಶಿಕಿರಣ್ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ನಿನ್ನೆ 41 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದರೆ, ಇಂದು ಈ ಸಂಖ್ಯೆ 61ಕ್ಕೇರಿದೆ. ಇವರಲ್ಲಿ ಮೂವರು ವೆಂಟಿಲೇಟರ್ನಲ್ಲಿದ್ದರೆ (ನಿನ್ನೆ ಒಬ್ಬರು), 10 ಮಂದಿ (6) ಐಸಿಯುನಲ್ಲಿದ್ದಾರೆ. ಉಳಿದಂತೆ 9 ಮಂದಿ (4)ಎಚ್ಡಿಯು ಹಾಗೂ 39 ಮಂದಿ (30) ಜನರಲ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.