ಬೆಂಗಳೂರು: ಪಿಸ್ತೂಲು ಕಳೆದುಕೊಂಡ ನ್ಯಾಯಮೂರ್ತಿ ಭದ್ರತಾ ಸಿಬ್ಬಂದಿ; ಪತ್ತೆಗೆ ಪೊಲೀಸರ ಮನವಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜ. 16: ನ್ಯಾಯಾಮೂರ್ತಿ ಅರುಣ್ ಅವರ ಭದ್ರತಾ ಸಿಬ್ಬಂದಿ ಕಳೆದುಕೊಂಡಿರು 10 ಜೀವಂತ ಗುಂಡುಗಳ್ಳುಳ್ಳ ಪಿಸ್ತೂಲ್ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಅರುಣ್ ಅವರ ಗನ್ಮ್ಯಾನ್ ವಿಜಯಪುರದ ಬಾಪೂಜಿನಗರದ ಕಲ್ಲಯ್ಯ ಮಠಪತಿ(42) ನೀಡಿದ ದೂರಿನ ಮೇರೆಗೆ ಪಶ್ಚಿಮ ವಿಭಾಗದ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಲ್ಲಯ್ಯ 2000ನೆ ಸಾಲಿನಲ್ಲಿ ಭಾರತೀಯ ಸೇನೆಗೆ ಸೇರಿ 17 ವರ್ಷಗಳ ಸೇವೆ ಸಲ್ಲಿಸಿ 2017ರಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದರು. ಅಲ್ಲಿಂದ 2019ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಯಾಗಿದ್ದು, ಸಿಎಆರ್ ಪಶ್ಚಿಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2020ರಿಂದ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿಗೆ ಭದ್ರತಾ ಸಿಬ್ಬಂದಿ ಆಗಿ ನಿಯೋಜನೆಗೊಂಡಿದ್ದರು.
ಇನ್ನೂ, ಕಲ್ಲಯ್ಯ ಡಿ.25ರಂದು ಸಂಜೆ 7ರ ವೇಳೆ ಮನೆಯಲ್ಲೇ ಮದ್ಯ ಸೇವಿಸಿ ಮೆಜೆಸ್ಟಿಕ್ಗೆ ಬಂದಿದ್ದು ಬಸ್ನಲ್ಲಿ ಆಸನ ಕಾಯ್ದಿರಿಸಲು ಟ್ರಾವೆಲ್ ಕಚೇರಿಯ ಮುಂಭಾಗ ಬಂದಿದ್ದಾರೆ. ಟಿಕೆಟ್ ಪಡೆಯಲು ಪಿಸ್ತೂಲ್, ಜೀವಂತ ಗುಂಡುಗಳು ಹಾಗೂ ಬಟ್ಟೆ ತುಂಬಿದ್ದ ಬ್ಯಾಗ್ ಅನ್ನು ಪಕ್ಕದಲ್ಲಿ ಇಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ಬ್ಯಾಗ್ ನೋಡಿದಾಗ ಕಳುವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.