ಬೆಂಗಳೂರು; ಜಾಮೀನು ಕೊಡಿಸಲು ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪ: ರೌಡಿಶೀಟರ್ ಸಹಚರರು ಪೊಲೀಸ್ ವಶಕ್ಕೆ
ಬೆಂಗಳೂರು, ಜ.19: ಇತ್ತೀಚಿಗೆ ಬಂಧನಕ್ಕೊಳಗಾಗಿರುವ ರೌಡಿಗೆ ಜಾಮೀನು ಕೊಡಿಸಲು ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ನಾಲ್ವರನ್ನು ಇಲ್ಲಿನ ವಿವಿ ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಕಿರಣ್, ಮಂಜು, ರಾಹುಲ್ ಹಾಗೂ ಕಾರ್ತಿಕ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂಧಿತನಾಗಿದ್ದ ರೌಡಿಶೀಟರ್ ರಾಹುಲ್ನನ್ನು ಜಾಮೀನಿನ ಮೇಲೆ ಬಿಡಿಸಲು ಅವನ ಸಹಚರರಾದ ನಾಲ್ವರು ಗಾಂಜಾ ಮಾರಾಟಕ್ಕೆ ಇಳಿದಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರಿಝ್ವಾನ್, ಭರತ್ ಹಾಗೂ ಆಟೊ ವಿಜಿ ಎಂಬುವರ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದ್ದು, ಸದ್ಯ ಬಂಧಿತರಿಂದ 20 ಕೆ.ಜಿ. ಗಾಂಜಾ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Next Story