ಬೆಂಗಳೂರು: ನೀರಿನ ಸಂಪ್ ಸ್ವಚ್ಛಗೊಳಿಸುವಾಗ ವಿದ್ಯುತ್ ತಗುಲಿ ತಂದೆ-ಮಗ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.19: ನೀರಿನ ಸಂಪ್ ಸ್ವಚ್ಛಗೊಳಿಸುವಾಗ ವಿದ್ಯುತ್ ಪ್ರವಹಿಸಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ಇಲ್ಲಿನ ಆರ್ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರ್.ಟಿ. ನಗರದ ರಾಮಕೃಷ್ಣ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ರಾಜು ಹಾಗೂ ಈತನ 10 ವರ್ಷದ ಮಗ ಸಾಯಿ ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.
ಇಲ್ಲಿನ ಸುಲ್ತಾನ್ಪಾಳ್ಯ ಬಳಿಯಿರುವ ರಾಮಕೃಷ್ಣ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಬೆಳಗ್ಗೆ ಸಂಪ್ ಸ್ವಚ್ಛಗೊಳಿಸಲು ತೆರಳಿದ್ದ ಸಂದರ್ಭದಲ್ಲಿ ರಾಜು ಎಂಬುವರಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪ್ಪನ ಜೊತೆಗೆ ಬಂದಿದ್ದ 10 ವರ್ಷದ ಮಗ ಸಾಯಿ, ತಂದೆಯ ಚೀರಾಟ ಕಂಡು ರಕ್ಷಿಸಲು ಹೋಗಿದ್ದಾನೆ. ಆಗ ಬಾಲಕನಿಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ..
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆರ್.ಟಿ.ನಗರ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಅಪಾರ್ಟ್ಮೆಂಟ್ ಮಾಲಕರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ.