ಉಡುಪಿ; ಓಎಲ್ಎಕ್ಸ್ನಲ್ಲಿ ವಂಚನೆ: ದೂರು
ಉಡುಪಿ, ಜ.20: ಓಎಲ್ಎಕ್ಸ್ನಲ್ಲಿ ಕೊವಿಯೋಲೆ ಖರೀದಿಸುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಸೋನಿಯಾ ಹಾಸ್ಟೆಲ್ನ ಖುಷಿ ಮೇಹ್ತಾ (19) ಎಂಬವರು ಜ.16ರಂದು ತನ್ನ ಕಿವಿಯೋಲೆ ಮಾರಾಟಕ್ಕಿರುವುದಾಗಿ ಓಎಲ್ಎಕ್ಸ್ನಲ್ಲಿ ಜಾಹೀರಾತು ನೀಡಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಕೊವಿಯೋಲೆ ಯನ್ನು ಖರೀದಿಸುವದಾಗಿ ತಿಳಿಸಿ, ಹಣವನ್ನು ಪೇಟಿಎಂ ಮೂಲಕ ಪಾವತಿಸುವು ದಾಗಿ ನಂಬಿಸಿ 5 ಹಾಗೂ 100 ರೂ.ವನ್ನು ಖುಷಿ ಅವರ ಖಾತೆಗೆ ಜಮಾ ಮಾಡಿದ್ದನು. ನಂತರ ಖುಷಿ ಖಾತೆಯಿಂದ ಹಂತ ಹಂತವಾಗಿ ಒಟ್ಟು 19,018ರೂ. ಹಣ ಪೇಟಿಎಂ ಮೂಲಕ ಕಡಿತಗೊಂಡಿದೆ.
ಇದನ್ನು ಗಮನಿಸಿದ ಖುಷಿ ಆತನಿಗೆ ತನ್ನ ಖಾತೆಯಿಂದ ಕಡಿತಗೊಂಡ ಹಣದ ಬಗ್ಗೆ ವಿಚಾರಿಸಿದಾಗ ಆತ ಹಣ ಮರುಪಾವತಿ ಮಾಡುವುದಾಗಿ ನಂಬಿಸಿ, ಆಕೆಯ ಸ್ನೇಹಿತೆ ಟಿ.ಸಾಯಿ ಚಂದನ ಎಂಬವರ ಪೇಟಿಎಂ ನಂಬರ್ ಪಡೆದು ಕೊಂಡನು. ತದನಂತರ ಸಾಯಿ ಚಂದನರ ಖಾತೆಯಿಂದ ಹಂತ ಹಂತವಾಗಿ ಒಟ್ಟು 74,800ರೂ. ಹಣ ಕಡಿತಗೊಂಡಿದೆ. ಹೀಗೆ ಕೊವಿಯೋಲೆಯನ್ನು ಖರೀದಿಸುವುದಾಗಿ ನಂಬಿಸಿ ಇಬ್ಬರ ಖಾತೆಯಿಂದ 93,818ರೂ. ಹಣವನ್ನು ಪೇಟಿಎಂ ಮೂಲಕ ಕಡಿತಗೊಳಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.