ಎಂಇಎಸ್, ಶಿವಸೇನಾ ಕಾರ್ಯಕರ್ತರಿಂದ ಜ.22ರಂದು ಬೆಳಗಾವಿಗೆ ಮುತ್ತಿಗೆ: ಮರಾಠಿ ಮಾಧ್ಯಮದಲ್ಲಿ ವರದಿ ಪ್ರಕಟ
ಸಾಂದರ್ಭಿಕ ಚಿತ್ರ
ಬೆಳಗಾವಿ, ಜ.20: ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಎಂಇಎಸ್ ಹಾಗೂ ಶಿವಸೇನಾ ಕಾರ್ಯಕರ್ತರ ಮೇಲೆ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯುವಂತೆ ಆಗ್ರಹಿಸಿ ಜ.22ರಂದು ಬೆಳಗಾವಿಗೆ ಮುತ್ತಿಗೆ ಹಾಕಲಾಗುವುದು ಎಂದು ಆ ಸಂಘಟನೆಗಳವರು ಹೇಳಿರುವುದಾಗಿ ಮರಾಠಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಎಂಇಎಸ್, ಶಿವಸೇನಾ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಹಾಪುರದಿಂದ ಹೊರಟು ಬೆಳಗಾವಿಗೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದಾರೆ. ಅಲ್ಲಿಯೇ ಶಿವಾಜಿ ಮಹಾರಾಜರ ಪ್ರತಿಮೆಗೆ ಅಭಿಷೇಕ ಮಾಡಿ ಪಾದಯಾತ್ರೆಗೆ ಚಾಲನೆ ಆರಂಭಿಸಲಿದ್ದಾರೆ. ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಹಲವು ನದಿಗಳ ನೀರಿನಿಂದ ಅಭಿಷೇಕ ಮಾಡುತ್ತಾ ಬೆಳಗಾವಿ ಕಡೆಗೆ ತೆರಳುತ್ತೇವೆ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.
ಬೆಳಗಾವಿಯಲ್ಲಿ ಆಯೋಜಿಸಿದ್ದ ವಿಧಾನಮಂಡಲ ಚಳಿಗಾಲದ ಅಧಿವೇಶನ ಬಹಿಷ್ಕರಿಸಿ ಎಂಇಎಸ್ನವರು ವ್ಯಾಕ್ಸಿನ್ ಡಿಪೋದಲ್ಲಿ ನಡೆಸಿದ್ದ ಮಹಾಮೇಳಾವ ವೇಳೆ ಎಂಇಎಸ್ ಅಧ್ಯಕ್ಷ ದೀಪಕ ದಳವಿ ಮುಖಕ್ಕೆ ಕನ್ನಡ ಹೋರಾಟಗಾರರು ಮಸಿ ಬಳಿದಿದ್ದರು. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ, ಅದಕ್ಕೆ ಪ್ರತಿಯಾಗಿ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದರು.
ಶಿವಾಜಿಗೆ ಅವಮಾನ ಖಂಡಿಸಿ ನಡೆದಿದ್ದ ಪ್ರತಿಭಟನೆ ನಂತರ ಬೆಳಗಾವಿ ನಗರದ ಹಲವೆಡೆ ಕಲ್ಲು ತೂರಾಟ ನಡೆಸಿದ್ದ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪದ ಮೇಲೆ 38 ಮಂದಿ ಎಂಇಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಹಾಯಕ್ಕೆ ಬರುವಂತೆ ಆ ಸಮಿತಿಯ ಮುಖಂಡರು ಮಹಾರಾಷ್ಟ್ರದ ಹೋರಾಟಗಾರರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.