ಹರಿದ್ವಾರ ದ್ವೇಷ ಭಾಷಣ ಪ್ರಕರಣ: ಯತಿ ನರಸಿಂಗಾನಂದ ಜಾಮೀನು ತಿರಸ್ಕೃತ
'ಹೇಳಿಕೆಗಳು ಕೋಮು ಭಾವನೆ ಕೆರಳಿಸುತ್ತವೆ' ಎಂದ ಉತ್ತರಾಖಂಡದ ನ್ಯಾಯಾಲಯ
ಯತಿ ನರಸಿಂಗಾನಂದ (Photo: Narsinghanand Saraswati/Facebook)
ಡೆಹ್ರಾಡೂನ್: ಉತ್ತರಾಖಂಡದ ನ್ಯಾಯಾಲಯವೊಂದು ಹರಿದ್ವಾರ ದ್ವೇಷ ಭಾಷಣ ಪ್ರಕರಣದ ಆರೋಪಿ ಯತಿ ನರಸಿಂಗಾನಂದ ಗಿರಿಗೆ ಜಾಮೀನು ನಿರಾಕರಿಸಿದೆ ಎಂದು Live Law ಗುರುವಾರ ವರದಿ ಮಾಡಿದೆ.
ಆರಂಭದಲ್ಲಿ ಗಿರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಹಾಗೂ 509 (ಯಾವುದೇ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ದ್ವೇಷ ಭಾಷಣ ಪ್ರಕರಣದಲ್ಲಿ ಗಿರಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಜನವರಿ 17 ರಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದರು.
"ಸಾಮಾಜಿಕ ಮಾಧ್ಯಮಗಳ ಮೂಲಕ ಕೋಮು ಭಾವೋದ್ರೇಕಗಳನ್ನು ಪ್ರಚೋದಿಸಲು ಮತ್ತು ಧಾರ್ಮಿಕ ಸೌಹಾರ್ದತೆ/ವಾತಾವರಣವನ್ನು ಹಾಳುಮಾಡಲು ಗಿರಿ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ ಹಾಗೂ ಈ ಪ್ರದೇಶದಲ್ಲಿ ಗಂಭೀರ ಅಪರಾಧಗಳು ನಡೆಯುವ ಬಲವಾದ ಸಾಧ್ಯತೆಯಿದೆ" ಎಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಖೇಶ್ ಆರ್ಯ ಅವರು ಬುಧವಾರ ಅಭಿಪ್ರಾಯಿಸಿದರು.
ಗಿರಿ ಮಾಡಿದ್ದಾರೆ ಎನ್ನಲಾದ ಅಪರಾಧ ಗಂಭೀರ ಸ್ವರೂಪದ್ದಾಗಿದೆ ಎಂದ ನ್ಯಾಯಾಧೀಶರು, ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ವಿಚಾರವನ್ನು ಗಮನಕ್ಕೆ ತೆಗೆದುಕೊಂಡರು ಎಂದು ವರದಿಯಾಗಿದೆ.