ನರ್ಮ್ ಬಸ್ ಪ್ರಯಾಣ ದಳ ಹೆಚ್ಚಳ: ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡನೆ
ಉಡುಪಿ, ಜ.30: ಯಾವುದೇ ಪೂರ್ವ ಸೂಚನೆ ನೀಡದೆ ಲಾಕ್ಡೌನ್ ನಿಂದ ಜನತೆ ಉದ್ಯೋಗ, ವ್ಯಾಪಾರವಿಲ್ಲದೆ ಕಂಗಾಲಾಗಿರುವ ಸಮಯದಲ್ಲಿ ಖಾಸಗಿ ಬಸ್ ಮಾಲಕರ ಒತ್ತಡಕ್ಕೆ ಮಣಿದು ಸರಕಾರ ನರ್ಮ್ ಬಸ್ ಟಿಕೆಟ್ ದರ ಹೆಚ್ಚಿಸಿರುವ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.
ನರ್ಮ್ ಬಸ್ ದರ ಏರಿಕೆಯಿಂದ ಖಾಸಗಿ ಮತ್ತು ಸರಕಾರಿ ಸಿಟಿ ಬಸ್ ಪ್ರಯಾಣದ ಕನಿಷ್ಠ ದರ ಏಕರೂಪವಾಗಲಿದೆ. ಇದರಿಂದ ಬಡ ಕೂಲಿಕಾರ್ಮಿಕ ರಿಗೆ ಹಾಗೂ ದಿನಗೂಲಿ ನೌಕರರಿಗೆ ಹೆಚ್ಚಿನ ಹೊರೆ ಬಿದ್ದಂತಾಗಿದೆ. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಬಸ್ ದರ ಹೆಚ್ಚಳವಾಗದಿದ್ದರೂ ಉಡುಪಿ ಹಾಗೂ ಮಂಗಳೂರಿಗೆ ಮಾತ್ರ ಸೀಮಿತವಾಗಿ ಹೆಚ್ಚಳ ಮಾಡಿರುವ ಉದ್ದೇಶವೇನು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಜನರ ಬೇಡಿಕೆಯಿದ್ದರೂ ರೂಟ್ಗಳಲ್ಲಿ ಬಸ್ ಓಡಾಟ ಪ್ರಾರಂಭವಾಗಿಲ್ಲ. ನಗರದ ಎಲ್ಲಾ ಭಾಗಗಳಿಗೂ ನರ್ಮ್ ಬಸ್ ಓಡಿಸಬೇಕು. ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಜನರ ಬೇಡಿಕೆಗೆ ಸಾರಿಗೆ ಇಲಾಖೆ ಶೀಘ್ರ ಸ್ಪಂದಿಸಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಸಾರಿಗೆ ಇಲಾಖೆಯನ್ನು ಆಗ್ರಹಿಸಿದ್ದಾರೆ.