ಹಿಜಾಬ್ ವಿವಾದ; ಸಂಘಪರಿವಾರದ ಷಡ್ಯಂತ್ರದ ಅಭಿಯಾನ: ವೆಲ್ಫೇರ್ ಪಾರ್ಟಿ ಆರೋಪ
ಭಟ್ಕಳ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ಉಡುಪಿಯ ಹಿಜಾಬ್ ವಿವಾದ ಸಂಘಪರಿವಾರ ನಡೆಸುತ್ತಿರುವ ಕೋಮುವಾದಿ ಷಡ್ಯಂತ್ರ ಅಭಿಯಾನದ ಒಂದು ರೂಪವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರಕನ್ನಡ ಜಿಲ್ಲಾ ಘಟಕ ಆರೋಪಿಸಿದೆ.
ಈ ಕುರಿತಂತೆ ಸೋಮವಾರ ಮದೀನಾ ಕಾಲೋನಿಯಲ್ಲಿನ ವೆಲ್ಫೇರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರು ಆರೋಪಿಸಿದರು.
ಹಿಜಾಬ್ ಒಂದು ವಿವಾದದ ವಿಷಯವೇ ಅಲ್ಲ. ಮುಂಚಿನಿಂದಲೂ ಮುಸ್ಲಿಂ ಹೆಣ್ಣುಮಕ್ಕಳು ಶಾಲೆ ಕಾಲೇಜುಗಳಿಗೆ ಹಿಜಾಬ್ ಹಾಕಿಕೊಂಡೇ ಹೋಗುತ್ತಿದ್ದಾರೆ. ಆಕಸ್ಮಿಕವಾಗಿ ಇದನ್ನು ವಿವಾದದ ವಿಷಯವನ್ನಾಗಿ ಮಾಡಲಾಗಿದೆ. ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತವರು. ಹಿಜಾಬ್ ಹಾಕಿಕೊಂಡೇ ಶಾಲೆಗೆ ಹೋಗುತ್ತಿದ್ದರು. ಯಾವುದೇ ರೀತಿಯ ಅಡೆತಡೆ ಇರಲಿಲ್ಲ. ಈಗ ಎರಡು ತಿಂಗಳಿಂದ ಇದನ್ನು ವಿವಾದದ ವಿಷಯವನ್ನಾಗಿ ಮಾಡಲಾಗಿದೆ ಮುಖಂಡ ಅಬ್ದುಲ್ ಜಬ್ಬಾರ್ ಅಸದಿ ಹೇಳಿದರು.
ಈ ಸಂದರ್ಭದಲ್ಲಿ ಉ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಕ್, ಜಿಲ್ಲಾ ಉಪಾಧ್ಯಕ್ಷ ಶೌಖತ್ ಖತೀಬ್, ಮುಖಂಡರಾದ ಫಾರೂಖ್ ಮಾಸ್ಟರ್, ನವೀದ್ ಶಾಬಂದ್ರಿ ಮತ್ತಿತರರು ಉಪಸ್ಥಿತರಿದ್ದರು.