ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ತೆಗೆಯಲು ಶಾಸಕ ರಘುಪತಿ ಭಟ್ ಕಾರಣ: ಅಥಾವುಲ್ಲ ಪುಂಜಾಲಕಟ್ಟೆ ಆರೋಪ
ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಹಾಕಿದ ವಿವಾದ
ಉಡುಪಿ, ಫೆ.9: ಹಿಜಾಬ್ ವಿಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುವ ಮೂಲಕ ಭಾರತದ ಮಾನ ಮರ್ಯಾದೆ ತೆಗೆದಿರುವುದು ಉಡುಪಿ ಶಾಸಕ ರಘುಪತಿ ಭಟ್, ಯಶ್ಪಾಲ್ ಸುವರ್ಣ ಹಾಗೂ ರಾಜ್ಯ ಬಿಜೆಪಿ ಸರಕಾರ. ಇವರು ಇಲ್ಲಿನ ಕಾನೂನು ಉಲ್ಲಂಘನೆ ಮಾಡಿ, ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿರುವುದೇ ಇದಕ್ಕೆ ಕಾರಣ. ನಾವು ಈಗಲೂ ವಿದ್ಯಾರ್ಥಿನಿಯರ ಹಕ್ಕಿಗಾಗಿ ಸಂವಿಧಾನ ಬದ್ಧವಾಗಿಯೇ ಹೋರಾಟ ಮಾಡುತ್ತಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿಚಾರವನ್ನು ಸ್ಥಳೀಯ ಮಟ್ಟದಲ್ಲಿ ಮುಗಿಸದೆ, ಇಲ್ಲಿನ ಬಿಜೆಪಿ ಶಾಸಕ ರಘುಪತಿ ಭಟ್ ಹಾಗೂ ಯಶ್ಪಾಲ್ ಸುವರ್ಣರ ಕುಮ್ಮಕ್ಕಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೂ ಹಬ್ಬುವಂತೆ ಆಗಿದೆ. ರಘುಪತಿ ಭಟ್ ಹಠಮಾರಿ ಧೋರಣೆಯಿಂದ ವಿವಾದ ಸೃಷ್ಠಿಯಾಗಿದೆ ಎಂದು ಆರೋಪಿಸಿದರು.
ಹೈಕೋರ್ಟಿನ ಮೇಲೆ ನಮಗೆ ವಿಶ್ವಾಸ ಇದೆ. ಒಂದು ವೇಳೆ ತೀರ್ಪು ನಮ್ಮ ವಿರುದ್ಧವಾಗಿ ಬಂದರೆ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಕಾನೂನಿನಲ್ಲಿ ಅದಕ್ಕೆ ಅವಕಾಶ ಇದೆ. ಆದರೆ ಈ ವಿಚಾರವನ್ನು ವಿವಾದ ಮಾಡಿ ರುವ ಸರಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದರು.
ಹಿಜಾಬ್ ಹಾಕಲು ಒತ್ತಡವಿಲ್ಲ
ಹಿಜಾಬ್ ಹಾಕಲು ಇಚ್ಛಿಸುವವರ ಹಕ್ಕನ್ನು ತಡೆಯಲು ಯಾರಿಗೂ ಅಧಿಕಾರ ಇಲ್ಲ. ಇದೇ ಸರಕಾರಿ ಕಾಲೇಜಿನ ಸುಮಾರು 80 ಮಕ್ಕಳಿದ್ದಾರೆ. ಉಳಿದವರು ಹಿಜಾಬ್ ಹಾಕಿಕೊಂಡು ಬರುವುದಿಲ್ಲ. ಅವರಿಗೆ ಯಾರು ಕೂಡ ಹಿಜಾಹ್ ಹಾಕಿಕೊಂಡು ಬರುವಂತೆ ಒತ್ತಡ ಹಾಕಿಲ್ಲ. ಅದು ಅವರ ವೈಯಕ್ತಿಕ ಇಚ್ಛೆ ಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರಣೆ ನಡೆಯುವಾಗ ರಾಜ್ಯದಾದ್ಯಂತ ಏಕ ಕಾಲದಲ್ಲಿ ಕೇಸರಿ ಶಾಲು ಮತ್ತು ಪೇಟ ಧರಿಸಿಕೊಂಡು ಜೈ ಶ್ರೀರಾಮ್ ಘೋಷಣೆಯೊಂದಿಗೆ ಗಲಭೆ ನಡೆಸಿರುವುದರ ಹಿಂದೆ ಎಬಿವಿಪಿ ಮತ್ತು ಸಂಘ ಪರಿವಾರದ ಮುಖಂಡರ ಕೈವಾಡವಿದೆ ಎಂದು ಅವರು ಆರೋಪಿಸಿದರು.
ಭಾಗವಾಧ್ವಜ ಹಾರಿಸಿದವರ ವಿರುದ್ಧ ಇನ್ನು ಕೂಡ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಇಷ್ಟೆಲ್ಲಾ ರಾದ್ದಾಂತ ನಡೆಯುವಾಗ ಮುಖ್ಯಮಂತ್ರಿ ಮೌನ ವಹಿಸಿರುವುದು ವಿಪರ್ಯಾಸ. ಎಬಿವಿಪಿ ಮತ್ತು ಸಂಘಪರಿವಾರ ಇಷ್ಟೆಲ್ಲಾ ರಾದ್ದಾಂತ ರಾಜ್ಯಾದ್ಯಂತ ನಡೆಸಿದರೂ ಶಿಕ್ಷಣ ಸಚಿವ ನಾಗೇಶ್ ಕ್ಯಾಂಪಸ್ ಫ್ರಂಟ್ ಮೇಲೆ ನಿರಾಧಾರ ಆರೋಪ ಮಾಡಿರುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ನ ರಾಜ್ಯ ಸಮಿತಿ ಸದಸ್ಯ ಮಸೂದ್ ಮನ್ನಾ, ಜಿಲ್ಲಾಧ್ಯಕ್ಷ ಅಸೀಲ್ ಅಕ್ರಂ ಉಪಸ್ಥಿತರಿದ್ದರು.
‘ಹಿಜಾಬ್ ಹಾಕಿರುವ ಫೋಟೋ ನಮ್ಮಲ್ಲಿದೆ’
ವಿದ್ಯಾರ್ಥಿನಿಯರು ಹಿಜಾಬ್ ಹಾಕದೆ ಕಾಲೇಜಿನಲ್ಲಿರುವ ಬಗ್ಗೆ ರಘುಪತಿ ಭಟ್ ನೀಡುವ ಫೋಟೋ ಸಾಕ್ಷಿಯ ಕುರಿತು ಪ್ರತಿಕ್ರಿಯಿಸಿದ ಅಥಾವುಲ್ಲ ಪುಂಜಾಲಕಟ್ಟೆ, ಶಾಸಕರು ಸುಳ್ಳು ಹೇಳುತ್ತಿದ್ದಾರೆ. ನಮ್ಮಲ್ಲಿ ಆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ತರಗತಿಯಲ್ಲಿರುವ ಫೋಟೋ ಇದೆ. ಅದೇ ರೀತಿ ಹಿಜಾಬ್ ಹಾಕಿ ಉಪನ್ಯಾಸಕರ ಜೊತೆ ಇರುವ ಫೋಟೋ ಕೂಡ ನಮ್ಮಲ್ಲಿ ಇದೆ ಎಂದು ಹೇಳಿದರು.
ಹಿಜಾಬ್ ವಿಚಾರದ ಹಿಂದೆ ಸಿಎಫ್ಐ ಕುಮ್ಮುಕ್ಕು ಆರೋಪದ ಬಗ್ಗೆ ಪ್ರತ್ರಿಯಿಸಿದ ಅವರು, ಸ್ಕಾರ್ಫ್ ಹಾಕದವರಿಗೆ ಸ್ಕಾರ್ಫ್ ಹಾಕಿಸುವ ಉದ್ದೇಶ ನಮಗೆ ಇಲ್ಲ. ಅದು ನಿರಾಧಾರ ಆರೋಪವಾಗಿದೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಿದ್ದೇವೆಯೇ ಹೊರತು ಕ್ಮುಮಕ್ಕು ನೀಡುತ್ತಿಲ್ಲ. ಕೇವಲ ಹಿಜಾಬ್ ಮಾತ್ರವಲ್ಲ ವಿದ್ಯಾರ್ಥಿನಿಯರ ಎಲ್ಲ ಹೋರಾಟದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದರು.