ಫೆ.11ರಿಂದ ರಂಗಭೂಮಿಯಿಂದ ರಂಗೋತ್ಸವ ಕಾರ್ಯಕ್ರಮ
ಉಡುಪಿ, ಫೆ.9: ಉಡುಪಿ ರಂಗಭೂಮಿ ವತಿಯಿಂದ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಪರಿಷತ್ ಉಡುಪಿ ಘಟಕದ ಸಹಯೋಗದೊಂದಿಗೆ ಮೂರು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಹಾಗೂ ನೂತನ ರವೀಂದ್ರ ಮಂಟಪದಲ್ಲಿ ಫೆ.11ರಿಂದ 13ರವರೆಗೆ ಹಮ್ಮಿ ಕೊಳ್ಳಲಾಗಿದೆ.
ಫೆ.11ರಂದು ಸಂಜೆ 4ಗಂಟೆಗೆ ರಂಗೋತ್ಸವವನ್ನು ಶ್ರೀಕ್ಷೇತ್ರ ಹೊರನಾಡು ಧರ್ಮದರ್ಶಿ ಭೀಮೇಶ್ವರ ಜೋಶಿ ಉದ್ಘಾಟಿಸಲಿರು ವರು. ‘ಜಾನಪದ ವೈಭವ’ ಕಾರ್ಯಕ್ರಮದಲ್ಲಿ ಯಕ್ಷಗಾನ ಕೇಂದ್ರ ಮುಖ್ಯ ಗುರು ಬನ್ನಂಜೆ ಸಂಜೀವ ಸುವರ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಫೆ.12ರಂದು ಸಂಜೆ 5.45ಕ್ಕೆ ರಂಗಭೂಮಿ ಆಯೋಜಿಸಿದ 42ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ನಂತರ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತ ಸಂಚಯ ಬೆಂಗಳೂರು ಇವರ ಕಾಮರೂಪಿಗಳ್ ನಾಟಕದ ಮರು ಪ್ರದರ್ಶನ ಜರಗಲಿದೆ.
ಫೆ.13ರಂದು ಸಂಜೆ 5.45ಕ್ಕೆ ನಾಟಕ, ಸಾಹಿತ್ಯ, ಶಿಕ್ಷಣ ಸಾಮಾಜಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ತರಳಬಾಳು ಜಗದ್ಗುರು ಶಾಖಾಮಠದ ಸಾಣೇಹಳ್ಳಿಯ ಪೀಠಾಧ್ಯಕ್ಷ ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಯವರಿಗೆ ರಂಗಭೂಮಿಯು ರಂಗ ಪಂಚಾನನ ಬಿರುದಿನೊಂದಿಗೆ ರಂಗಭೂಮಿ ಪುರಸ್ಕಾರವನ್ನು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರದಾನ ಮಾಡ ಲಿರುವರು. ಬಳಿಕ ಸೈಡ್ ವಿಂಗ್ ಬೆಂಗಳೂರು ಇವರಿಂದ ಹಾಸ್ಯ ನಾಟಕ ಸಡನ್ನಾಗ್ ಸತ್ತೋದ್ರೆ? ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವಿರಾಜ್ ನಾಯಕ್ ಉಪಸ್ಥಿತರಿದ್ದರು.