ಹಿಜಾಬ್ ಪ್ರಕರಣದಿಂದ ಚುನಾವಣೆ ಲಾಭ ಪಡೆಯಲು ಬಿಜೆಪಿ ಹುನ್ನಾರ: ಬಾಲಕೃಷ್ಣ ಶೆಟ್ಟಿ ಆರೋಪ
ಉಡುಪಿ, ಫೆ.11: ಹಿಂದು ಮತ್ತು ಮುಸ್ಲಿಮರ ಮಧ್ಯೆ ಧ್ವೇಷ ಭಾವನೆ ಸೃಷ್ಠಿಸಿ ಚುನಾವಣೆ ಲಾಭ ತೆಗೆದುಕೊಳ್ಳುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ತನ್ನ ವೈಫಲ್ಯಗಳನ್ನು ಮರೆಮಾಚಲು ಹಿಜಾಬ್ ಧರಿಸುವುದನ್ನು ಕೋಮು ಗ್ರಸ್ಥಗೊಳಿಸಿದ ಬಿಜೆಪಿ ಸರಕಾರದ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ನೇತೃತ್ವದಲ್ಲಿ ಶುಕ್ರವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಹಿಜಾಬ್ಗೂ ಮೊದಲು ಸಂಘಪರಿವಾರ ಉಡುಪಿ ಜಿಲ್ಲೆಯಲ್ಲಿ ಹಲವು ಕಡೆ ಗಲಾಟೆಗಳನ್ನು ನಡೆಸಿದೆ. ಕಲ್ಮಾತ್ ಮಸೀದಿ ಜಾಗ, ನಕ್ರೆ ಪ್ರಾರ್ಥನ ಮಂದಿರದ ಮೇಲಿನ ದಾಳಿ, ಸಾಬರಕಟ್ಟೆ ಮತಾಂತರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಘಪರಿವಾರ ಗಲಾಟೆ ನಡೆಸಿತ್ತು. ಆದರೆ ನಾವು ಸಮಾಜದಲ್ಲಿ ಸಾಮರಸ್ಯ ವನ್ನು ಕಾಪಾಡುವ ಕೆಲಸ ಮಾಡಬೇಕಾಗಿದೆ ಎಂದರು.
ಪ್ರಸ್ತುತ ಪರೀಕ್ಷೆ ಸಮಯವಾಗಿರುವುದರಿಂದ ಮಕ್ಕಳುವ ಓದ ಬೇಕಾಗಿದೆ ಮತ್ತು ತಯಾರಿ ನಡೆಸಬೇಕಾಗಿದೆ. ಈ ಹಿಂದಿನ ಎರಡು ವರ್ಷ ಕೊರೋನಾ ದಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಇದೀಗ ಅದಕ್ಕಿಂತ ಅಪಾಯ ಕಾರಿಯಾದ ಕೋಮು ವೈರಸ್ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಅವರು ದೂರಿದರು.
ಸಿಪಿಎಂ ರಾಜ್ಯ ಉಪಾಧ್ಯಕ್ಷ ಕೆ.ಶಂಕರ್, ಮುಖಂಡ ಮಹಾಬಲ ವಡೇರ ಹೋಬಳಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುರೇಶ್ ಕಲ್ಲಾಗಾರ, ವೆಂಕಟೇಶ ಕೋಣಿ, ಎಚ್.ನರಸಿಂಹ, ಜಿಲ್ಲಾ ಸಮಿತಿ ಸದಸ್ಯರಾದ ಶಶಿಧರ್ ಗೊಲ್ಲ, ಉಮೇಶ್ ಕುಂದರ್, ಕವಿರಾಜ್ ಎಸ್., ರಾಮ ಕಾರ್ಕಡ, ಬಲ್ಕೀಸ್, ರಾಜು ದೇವಾಡಿಗ, ಉಡುಪಿ ತಾಲೂಕು ಸಮಿತಿ ಸದಸ್ಯರಾದ ನಳಿನಿ, ಸರೋಜ, ಗೊಡ್ವಿನ್, ಪಕ್ಷದ ಸದಸ್ಯರಾದ ವಿದ್ಯರಾಜ್, ಮೋಹನ್, ಚಂದ್ರ ಶೇಖರ್, ಶೀಲಾವತಿ, ಬುದ್ಯ ಉಪಸ್ಥಿತರಿದ್ದರು