ಅಭಿವೃದ್ಧಿ ಕಮಿಟಿ ಸಮವಸ್ತ್ರ ಕಡ್ಡಾಯಗೊಳಿಸಿರುವ ಕಾಲೇಜಿಗಳಿಗೆ ಹೈಕೋರ್ಟ್ ಆದೇಶ ಅನ್ವಯ: ಉಡುಪಿ ಡಿಸಿ
ಉಡುಪಿ, ಫೆ.15: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ಹೊರಡಿಸಿರುವ ಮಧ್ಯಂತರ ಆದೇಶವನ್ನು ಎಲ್ಲರು ಪಾಲಿಸಬೇಕು. ಯಾವ ಕಾಲೇಜುಗಳ ಅಭಿವೃದ್ಧಿ ಸಮಿತಿಯು ಸಮವಸ್ತ್ರ ಅಥವಾ ಡ್ರೆಸ್ಕೋಡ್ ಕಡ್ಡಾಯ ಮಾಡಿದೆ. ಅಲ್ಲೆಲ್ಲ ಹೈಕೋರ್ಟ್ ಮಧ್ಯಂತರ ಆದೇಶ ಅನ್ವಯವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಬುಧವಾರದಿಂದ ಕಾಲೇಜುಗಳು ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ಪಾಲಿಸುವಂತೆ ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆದ ವಿವಿಧ ರಾಜಕೀಯ, ಧಾರ್ಮಿಕ ಮತ್ತು ಸಂಘಟನೆಗಳ ಮುಖಂಡರ ಶಾಂತಿಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.
ಹೈಕೋರ್ಟ್ ಅಂತಿಮ ತೀರ್ಪು ಬರುವರೆಗೆ ಈಗ ಹೊರಡಿಸಿರುವ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಅದೇ ರೀತಿ ಕಾಲೇಜುಗಳಲ್ಲಿಯೂ ಹೈಕೋರ್ಟ್ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಮಕ್ಕಳು ಹಾಗೂ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಹೈಕೋರ್ಟ್ ಮೆಟ್ಟಿರುವ ವಿದ್ಯಾರ್ಥಿನಿಯರಿಗೆ ತಾಲಿಬಾನ್, ಉಗ್ರರ ಸಂಪರ್ಕ ಇದೆ ಎಂಬ ಜನಪ್ರತಿನಿಧಿಗಳ ಹೇಳಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣ ಈಗ ಹೈಕೋರ್ಟ್ ವಿಚಾರಣೆ ನಡೆಯುತ್ತಿದೆ. ಅಲ್ಲಿ ಎಲ್ಲ ವಿಚಾರಗಳು ಚರ್ಚೆ ಆಗುತ್ತಿವೆ. ಆದುದರಿಂದ ಎಲ್ಲರೂ ಹೈಕೋರ್ಟ್ನ ಆದೇಶವನ್ನು ಪಾಲನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಹೈಕೋರ್ಟ್ ಮಧ್ಯಂತರ ಆದೇಶವನ್ನು ಸಮರ್ಪಕವಾಗಿ ಪಾಲಿಸುವ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಶಾಂತಿ ಸಭೆ ನಡೆಸಲಾಗಿದೆ. ಅದೇ ರೀತಿ ಈ ಸಂಬಂಧ ಎಲ್ಲ ಕಾಲೇಜು ಅಭಿವೃದ್ಧಿ ಸಮಿತಿಯು ಪೋಷಕರ ಹಾಗೂ ವಿದ್ಯಾರ್ಥಿನಿಯರ ಸಭೆ ನಡೆಸಿದೆ. ಅಲ್ಲದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ತಾಲೂಕು ಮಟ್ಟದಲ್ಲೂ ಶಾಂತಿ ಸಭೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.
700ಕ್ಕೂ ಅಧಿಕ ಪೊಲೀಸರ ನಿಯೋಜನೆ: ಎಸ್ಪಿ
ಎಲ್ಲ ಕಾಲೇಜುಗಳು ನಾಳೆಯಿಂದ ಪುನಾರಂಭಗೊಳ್ಳುವುದರಿಂದ ಜಿಲ್ಲೆ ಯಾದ್ಯಂತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. 8 ಡಿಎಆರ್, ಎರಡು ಕೆಎಸ್ ಆರ್ಪಿ, ನಾಲ್ಕು ಡಿವೈಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, 11 ಪೊಲೀಸ್ ನಿರೀಕ್ಷಕರು, 36 ಉಪನಿರೀಕ್ಷಕರು ಸೇರಿದಂತೆ ಒಟ್ಟು 700ಕ್ಕೂ ಅಧಿಕ ಪೊಲೀಸ ರನ್ನು ನಿಯೋಜಿಸಲಾಗುತ್ತದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಈಗಾಗಲೇ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಮುಂಜಾಗತ್ರಾ ಕ್ರಮವಾಗಿ ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳನ್ನು ಸೂಕ್ಷ್ಮ ಪ್ರದೇಶದ ಕಾಲೇಜುಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಬೇಕಾದಷ್ಟು ಮಹಿಳಾ ಪೊಲೀಸರಿದ್ದು, ಎಲ್ಲ ಪೊಲೀಸ್ ಉಪ ವಿಭಾಗದಲ್ಲೂ ಮಹಿಳಾ ಪೊಲೀಸರನ್ನು ನಿಯೋಜಿಸಿಕೊಳ್ಳಲಾಗುವುದು. ಒಂದು ಮಹಿಳಾ ಸಶಸ್ತ್ರ ಮೀಸಲು ಪಡೆಯ ತುಕಡಿ ನಿಯೋಜಿಸಿಕೊಳ್ಳಲಾಗಿದೆ. ನಮ್ಮಲ್ಲಿ ಮಹಿಳಾ ಪೊಲೀಸರ ಯಾವುದೇ ಕೊರತೆ ಇಲ್ಲ ಎಂದು ಅವರು ಹೇಳಿದರು.