ಹೈಕೋರ್ಟ್ ಮಧ್ಯಂತರ ಆದೇಶದ ದುರ್ಬಳಕೆ ವಿರುದ್ಧ ಉಡುಪಿ ಡಿಸಿಗೆ ಮನವಿ
ಉಡುಪಿ, ಫೆ.16: ಹಿಜಾಬ್ ಕುರಿತು ರಿಟ್ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ದುರ್ಬಳಕೆ ಮತ್ತು ಬಲವಂತದ ಅನುಷ್ಠಾನಗೊಳಿಸುತ್ತಿರುವುದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿದ್ಯಾರ್ಥಿನಿಯರ ಪೋಷಕರು ಇಂದು ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಿದರು.
ಮಧ್ಯಂತರ ಆದೇಶವನ್ನು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ತಪ್ಪಾಗಿ ಅರ್ಥೈಸಿಕೊಂಡಿವೆ. ಈ ಎಲ್ಲಾ ಅರ್ಜಿಗಳ ಬಾಕಿ ಉಳಿದಿರುವ ವಿಚಾರಣೆಯನ್ನು ಪರಿಗಣಿಸಿಕೊಂಡು, ವಿದ್ಯಾರ್ಥಿಗಳು ಯಾವುದೇ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸುವವರಾಗಿದ್ದರೂ, ಕೇಸರಿ ಶಾಲು, ಸ್ಕಾರ್ಫ್ ಗಳು, ಹಿಜಾಬ್, ಧಾರ್ಮಿಕ ಧ್ವಜಗಳು ಅಥವಾ ತರಗತಿಯೊಳಗೆ ಧರಿಸುವುದನ್ನು ಮುಂದಿನ ಆದೇಶದವರೆಗೆ ನಾವು ನಿರ್ಬಂಧಿ ಸುತ್ತೇವೆ. ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ವಿದ್ಯಾರ್ಥಿಗಳ ವಸ್ತ ಸಂಹಿತೆ/ಸಮವಸ್ತವನ್ನು ನಿರ್ಧರಿಸಿ ರುವ ಸಂಸ್ಥೆಗಳಿಗೆ ಮಾತ್ರವೇ ಈ ಆದೇಶ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದು ಆದೇಶದಲ್ಲಿ ಹೇಳಿರುವುದಾಗಿ ಪೋಷಕರು ಡಿಸಿಗೆ ತಿಳಿಸಿದರು.
ಮಧ್ಯಂತರ ಆದೇಶದ ಅಂಶವು ರಾಜ್ಯ ಸರಕಾರದ ಮೂಲಕ ಆದೇಶಿಸಿ ಅನುಷ್ಠಾನಗೊಳಿಸಲು ಆದೇಶ ಅಥವಾ ನಿರ್ದೇಶನ ನೀಡುವುದಿಲ್ಲ. ಆದೇಶವು ವಿಶೇಷವಾಗಿ ವಿದ್ಯಾರ್ಥಿಗಳ ವಸ್ತ ಸಂಹಿತೆ/ಸಮವಸ್ತವನ್ನು ಗೊತ್ತುಪಡಿಸಿರುವ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಶಿಕ್ಷಣ ಇಲಾಖೆಯು ಇದನ್ನು ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ತಪ್ಪಾಗಿ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ತನ್ನ ವಿದ್ಯಾರ್ಥಿ ಗಳಿಗೆ ಸಮವಸ್ತ್ರವನ್ನು ಗೊತ್ತುಪಡಿಸಿರುವ ಸಂಸ್ಥೆಗಳಿಗೆ ಮಾತ್ರ ಈ ಆದೇಶವು ನಿರ್ದೇಶನ ನೀಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಆದೇಶದ ನೆಪದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಎಲ್ಲೆಡೆಯೂ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ತಮ್ಮ ಸಮವಸ್ತ್ರದಲ್ಲಿಯೇ ಶಾಲೆಗಳಿಗೆ ಭೇಟಿ ನೀಡಿ ಸಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಗಳಿಗೆ ತಮ್ಮ ಹಿಜಾಬ್ ಕಳಚುವಂತೆ ನಿರ್ದೇಶನ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಮತ್ತು ಈ ವಿಚಾರ ಹೈಕೋರ್ಟ್ ಮುಂದೆ ವಿಚಾರಣೆಯಲ್ಲಿರು ವಾಗಲೇ ಇಂತಹ ಕ್ರಮ ನಡೆದಿರುವುದು ಗಮನಾರ್ಹವಾಗಿದೆ ಎಂದು ಪೋಷಕರು ಮನವಿಯಲ್ಲಿ ತಿಳಿಸಿದ್ದಾರೆ.
ಆದುದರಿಂದ ಸಂಬಧಪಟ್ಟ ಅಧಿಕಾರಿಗಳಿಗೆ ತಿಳಿಹೇಳುವಂತೆ ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹಿಜಾಬ್ ಅನ್ನು ಬಲವಂತವಾಗಿ ಕಳಚಲು ಅನಿವಾರ್ಯಪಡಿಸದಂತೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.