ರಾಷ್ಟ್ರಧ್ವಜಕ್ಕೆ ಅವಮಾನ; ಹರೀಶ್ ಪೂಂಜಾನ ಶಾಸಕ ಸ್ಥಾನ ರದ್ದತಿಗೆ ಎಸ್ಡಿಪಿಐ ಒತ್ತಾಯ
ಮಂಗಳೂರು, ಮಾ.1: ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ಮಂಡಲ ಸಭೆಯಲ್ಲಿ ಭಾಷಣಗೈದ ಶಾಸಕ ಹರೀಶ್ ಪೂಂಜಾ ಸಚಿವ ಈಶ್ವರಪ್ಪರ ದೇಶದ್ರೋಹದ ಹೇಳಿಕೆಯನ್ನು ಸಮರ್ಥಿಸುತ್ತಾ ಕೆಂಪುಕೋಟೆಯಲ್ಲಿ ಭಗವಾದ್ವಜ ಹಾರಿಸಿಯೇ ತೀರುತ್ತೇವೆ ಎಂಬ ಪ್ರಚೋದನಕಾರಿ ಹೇಳಿಕೆಯ ಹಿನ್ನೆಲೆಯಲ್ಲು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಮತ್ತು ಹರೀಶ್ ಪೂಂಜಾನ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಎಸ್ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿಯ ಶಾಸಕರು, ಸಚಿವರು ದಿನನಿತ್ಯ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವಾಗ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನ ವಹಿಸುತ್ತಿರುವುದು ಯಾತಕ್ಕೆ. ಇಂತಹ ಹೇಳಿಕೆಗಳ ವಿರುದ್ಧ ದೂರು ಕೊಟ್ಟರೆ ಅದನ್ನು ದಾಖಲಿಸಲು ಹಿಂದೇಟು ಹಾಕುತ್ತಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.
ತನ್ನ ಜವಾಬ್ದಾರಿ ಮರೆತು ನಾಡಿನ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಹರೀಶ್ ಪೂಂಜಾ ಈ ಹಿಂದೆಯೂ ನೀಡಿದ್ದರು. ಇವರ ವಿರುದ್ಧ ಜಿಲ್ಲೆಯ ಹಲವು ಠಾಣೆಗಳಲ್ಲಿ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂತಹ ದೇಶದ್ರೋಹಿ ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ಅದ್ದರಿಂದ ಕೂಡಲೇ ಜಿಲ್ಲಾಡಳಿತ ಅವರ ವಿರುದ್ಧ ದೂರು ದಾಖಲಿಸಬೇಕು ಹಾಗೂ ರಾಜ್ಯ ವಿಧಾನಸಭೆಯ ಸ್ಪೀಕರ್ ಹರೀಶ್ ಪೂಂಜಾರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಸದನದ ಘನತೆ, ಗೌರವವನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.