ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸಿ: ಹೆರಂಜಾಲು ಗೋಪಾಲ ಗಾಣಿಗ
ಉಡುಪಿ, ಮಾ.5: ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವವರು ಸತತ ಅಧ್ಯಯನಶೀಲರಾಗಿರಬೇಕು ಮತ್ತು ಕಲೆಯನ್ನು ತಪಸ್ಸಿನಂತೆ ಆಚರಿಸುತ್ತ ಶ್ರೀಮಂತಗೊಳಿಸಿಕೊಳ್ಳಬೇಕು ಎಂದು ಯಕ್ಷಗಾನದ ಹಿರಿಯ ರಂಗಗುರು ಹಾಗೂ ಭಾಗವತ ಹೆರಂಜಾಲು ಗೋಪಾಲ ಗಾಣಿಗ ಹೇಳಿದ್ದಾರೆ.
ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಮತ್ತು ಸಮಸ್ತರು ರಂಗ ಸಂಶೋಧನಾ ಕೆಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಿಂದ ಆಯೋಜಿಸ ಲಾದ ಮೂರು ದಿನಗಳ ಯಕ್ಷೋತ್ಸವವನ್ನು ಚಂಡೆ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ರಂಗ ನಿರ್ದೇಶಕ ಗೊಪಾಲಕೃಷ್ಣ ನಾಯರಿ ಮಾತನಾಡಿ, ಚತುರ್ವಿದ ಅಭಿನಯದ ಮಹತ್ವವನ್ನು ವಿವರಿಸುತ್ತಾ, ವಾಚಿಕಾಭಿನಯವು ಇತರೆ ಎಲ್ಲಾ ಪ್ರದರ್ಶಕ ಕಲೆಗಳಿಗಿಂತ ಯಕ್ಷಗಾನದಲ್ಲೇ ಅತ್ಯಂತ ಶಕ್ತಿಯುತವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ವಿದುಷಿ ಭಾಗೀರಥಿ, ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಂಸ ದಿಗ್ವಿಜಯ ಮತ್ತು ಭಾಸನ ಕರ್ಣಭಾರ ಯಕ್ಷಗಾನ ಪ್ರಯೋಗಗಳು ನಡೆುದವು.
ಭಾಗವತ ಕೇಶವ ಆಚಾರ್ಯ ಪ್ರಾರ್ಥಿಸಿ ಬ್ರಹ್ಮಾವರ ತಾಲೂಕು ಕ.ಸಾ.ಪ ಅಧ್ಯಕ್ಷ, ನಿವೃತ್ತ ಶಿಕ್ಷಕ ಹಾಗೂ ಕಲಾವಿದ ರಾಮಚಂದ್ರ ಐತಾಳ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕವಯಿತ್ರಿ ಸುಮನಾ ಹೇರಳೆ ಕಾರ್ಯಕ್ರಮ ನಿರೂಪಿಸಿ, ಕಲಾವಿದ ಶಿವಾನಂದ ಮಯ್ಯ ವಂದಿಸಿದರು.