ಕುರ್ಕಾಲು ಯೋಜನೆ: ಮಾ.23ರಂದು ಹೋರಾಟ ಸಮಾಲೋಚನಾ ಸಭೆ
ಉಡುಪಿ : ಪಾಪನಾಶಿನಿ ನದಿಗೆ ಕಾಪು ತಾಲೂಕಿನ ಕುರ್ಕಾಲು ನಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಬರಲಿದ್ದು, ಈ ಜನವಿರೋಧಿ, ರೈತವಿರೋಧಿ ಯೋಜನೆಯ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲು ಮಾ.೨೩ರಂದು ಸಂಜೆ 5 ಗಂಟೆಗೆ ಕುರ್ಕಾಲು ಕಿಂಡಿ ಅಣೆಕಟ್ಟಿನ ವಠಾರದಲ್ಲಿ ಸಭೆ ಏರ್ಪಡಿಸಲಾಗಿದೆ.
ಕಾಪು ಪುರಸಭೆ, ಕಟಪಾಡಿ, ಏಣಗುಡ್ಡೆ, ಕುಂಜಾರು, ಸುಭಾಸ್ ನಗರ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ದೀರ್ಘಾವಧಿ ಬಾಳಿಕೆ ಬರಲು ಸಾಧ್ಯವೇ ಇರದ ಈ ಯೋಜನೆ ಯನ್ನು ಕಾರ್ಯಗತಗೊಳಿಸಲು ಹೊರಡುವುದರಿಂದ ಜನರ ತೆರಿಗೆ ಹಣವನ್ನು ಕುಡಿಯುವ ನೀರಿನ ಯೋಜನೆ ಹೆಸರಲ್ಲಿ ಪೋಲು ಮಾಡುವುದು ಬಿಟ್ಟು ಬೇರೇನೂ ಸಾಧನೆಯಾಗುವುದಿಲ್ಲ. ಜೊತೆಗೆ ಕಿಂಡಿ ಅಣೆಕಟ್ಟಿನ ಆಸುಪಾಸಿನ ಪ್ರದೇಶಗಳ ಜನತೆಗೆ, ಕೃಷಿಕರಿಗೆ ಹೊಸ ಹೊಸ ರೀತಿಯ ಸಮಸ್ಯೆಗಳು ಉಂಟಾಗಲಿವೆ ಎಂದು ಕೃಷಿಕ ಸಂಘ ಆರೋಪಿಸಿದೆ.
ಮಣಿಪುರ, ಕುರ್ಕಾಲು, ಕುಂಜಾರು ಪ್ರದೇಶಗಳ ಸಾರ್ವಜನಿಕರು, ಕೃಷಿಕರು ಸಭೆಯಲ್ಲಿ ಭಾಗವಹಿಸುವಂತೆ ಕುರ್ಕಾಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಡೆೆ ಹೋರಾಟ ಸಮಿತಿಯ ಸಂಚಾಲಕ ರವಿ ಪೂಜಾರಿ ಕುರ್ಕಾಲು, ಮಣಿರಾಜ್ ಕುರ್ಕಾಲು ಹಾಗೂ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರ ಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.