ರಾಜ್ಯದಲ್ಲಿ 50 ಎಂಆರ್ಎಫ್ ಘಟಕಗಳ ಸ್ಥಾಪನೆ: ಸಚಿವ ಈಶ್ವರಪ್ಪ
ಕಾರ್ಕಳ : ರಾಜ್ಯದಾದ್ಯಂತ ಗ್ರಾಮಗಳಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಸಪರ್ಮಕವಾಗಿ ವಿಲೇವಾರಿ ಮಾಡಲು ಒಟ್ಟು ೫೦ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕ(ಎಂಆರ್ಎಫ್)ಗಳನ್ನು ಈ ವರ್ಷ ಸ್ಥಾಪಿಸ ಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃಧ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪತಿಳಿಸಿದ್ದಾರೆ.
ಗ್ರಾಮೀಣಾಭಿವೃಧ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಕಳ ತಾಲೂಕು ಪಂಚಾಯತ್, ನಿಟ್ಟೆ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪದವುವಿನಲ್ಲಿ ನಿರ್ಮಿಸಲಾದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಿಟ್ಟೆಯ ಈ ಎಂಆರ್ಎಫ್ ಘಟಕವನ್ನು ರಾಜ್ಯದ ಎಲ್ಲಾ ಜಿಪಂಗಳ ಸಿಇಓ ಗಳು ವೀಕ್ಷಿಸಿ, ತಮ್ಮ ಜಿಲ್ಲೆಗಳಲ್ಲಿ ಅಳವಡಿಸಿಕೊಳ್ಳಬೇಕು. ದೆಹಲಿಯಲ್ಲಿ ನಡೆಯವ ಎಲ್ಲಾ ರಾಜ್ಯಗಳ ಗ್ರಾಮೀಣಾ ಭಿವೃದ್ಧಿ ಸಚಿವರ ಸಭೆಯಲ್ಲಿ ಈ ಘಟಕದ ಕಾರ್ಯದ ಕುರಿತು ಪ್ರದರ್ಶಿಸಿ, ಕೇಂದ್ರದಿಂದ ಈ ಘಟಕಗಳ ಸ್ಥಾಪನೆಗೆ ಆರ್ಥಿಕ ನೆರವು ಪಡೆಯಲಾಗುವುದು. ಈ ಘಟಕಗಳ ಸ್ಥಾಪನೆಯಿಂದ ಸ್ಥಳೀಯ ಜನತೆಗೆ ಉದ್ಯೋಗ ಸೃಷ್ಠಿಯಾಗುವ ಜೊತೆಗೆ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಮರ್ಪಕ ಪರಿಹಾರ ದೊರೆಯಲಿದೆ ಎಂದರು.
ಕೇಂದ್ರದ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಬಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರಕಾರ ಸ್ವಚ್ಛ ಬಾರತ್ ಮಿಷನ್ ಮೂಲಕ ದೇಶದ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದೆ. ಹಸಿ ಕಸವನ್ನು ಗೊಬ್ಬರವನ್ನಾಗಿ ಮತ್ತು ಒಣ ಕಸವನ್ನು ಸಂಪನ್ಮೂಲವನ್ನಾಗಿ ಬಳಕೆ ಮಾಡುವ ಬಗ್ಗೆ ಯೋಜನೆಗಳನ್ನು ರೂಪಿಸಿದೆ ಎಂದರು.
ಕಾರ್ಕಳ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಮಂಜೂರಾಗಿದ್ದು, ಸಿಆರ್ಎಫ್ ನಿಧಿ ಮೂಲಕ ರಸ್ತೆಗಳ ಅಭಿವೃದ್ದಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ರಸ್ತೆಗಳ ನಿರ್ಮಾಣ, ಒಳಾಂಗಣ ಕ್ರೀಡಾಂಗಣ ಮತ್ತು ಮಾಳ ಗೇಟ್ನಿಂದ ಕಾರ್ಕಳದವರೆಗೆ ಚತುಷ್ಪಥಗೊಳಿಸಲು ೧೮೦ ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಪುಸ್ತಕ ಬಿಡುಗಡೆ, ವಸ್ತು ಪ್ರದರ್ಶನ ಮಳಿಗೆಗಳಿಗೆ ಚಾಲನೆ, ಗೋಬರ್ ಧನ್ ಘಟಕದ ಉದ್ಘಾಟನೆ ನೆರವೇರಿಸಲಾಯಿತು.
ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರ್ನಾಟಕ ಗೇರು ಅಭಿವೃಧ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ನಿಟ್ಟೆ ಗ್ರಾಪಂ ಅಧ್ಯಕ್ಷ ಸತೀಶ್ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಮಂಗಳೂರು ರಾಮಕೃಷ್ಣ ಮಿಷನ್ನ ಸ್ವಾಮಿ ಏಕಗಮ್ಯಾನಂದ ಜೀ ಉಪಸ್ಥಿತರಿದ್ದರು.
ಜಿಪಂ ಸಿಇಓ ಡಾ.ನವೀನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಕಾರ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕಾಡೂರು ಕಾರ್ಯಕ್ರಮ ನಿರೂಪಿಸಿದರು.
ʼʼಜಿಲ್ಲೆಯಲ್ಲಿ ಥರ್ಮಾಕೋಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು 50 ಲಕ್ಷ ರೂ ವೆಚ್ಚದಲ್ಲಿ ಘಟಕ ಸ್ಥಾಪಿಸಲು ಶೀಘ್ರದಲ್ಲಿ ಅನುಮತಿ ನೀಡಲಾಗು ವುದು. ಹೆಬ್ರಿ ತಾಲೂಕು ಪಂಚಾಯತ್ನ ನೂತನ ಕಟ್ಟಡಕ್ಕೆ 2 ಕೋಟಿ ಅನುದಾನ ಹಾಗೂ ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದುʼʼ.
-ಕೆ.ಎಸ್.ಈಶ್ವರಪ್ಪ, ಸಚಿವರು