ಕಾನೂನಿನಡಿ ಯಾರೂ ಧ್ವನಿವರ್ಧಕ ಬಳಸಬಹುದು: ಸಚಿವ ಬಿ.ಸಿ. ಪಾಟೀಲ್
ಉಪ್ಪುಂದ (ಕುಂದಾಪುರ) : ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ಮೈಕ್ ಬಳಸಲು ಹಲವಾರು ನಿಬಂಧನೆಗಳಿವೆ. ಆ ನಿಬಂಧನೆಗೊಳಪಟ್ಟು ಯಾರೂ ಬೇಕಾದರು ಧ್ವನಿವರ್ಧಕ ಬಳಸಬಹುದು ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಧ್ವನಿವರ್ಧಕ ಬಳಕೆಗೆ ಪರವಾನಿಗೆ ನೀಡಲಾಗುತ್ತದೆ. ಆದರೆ ಧ್ವನಿ 50 ಅಡಿಗಿಂತ ಹೆಚ್ಚು ಹೋಗಬಾರದೆಂದು ನಿಯಮವಿದೆ. ಇದೆಲ್ಲಾ ನಿಬಂಧನೆ ಪಾಲಿಸಿ ಯಾರೂ ಬೇಕಾದರೂ ಬಳಸಬಹುದು ಎಂದು ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸಚಿವರು ಪ್ರತಿಕ್ರಿಯಿಸಿದರು.
ಹಲಾಲ್, ಜಟ್ಕಾ ವಿಚಾರದಲ್ಲಿ ಸರಕಾರದ ನಿಲುವು ಮುಖ್ಯವಲ್ಲ. ಜನರ ಆಹಾರ, ಖರೀದಿ ವ್ಯವಸ್ಥೆ ತೀರ್ಮಾನ ಅವರದ್ದೆ ಆಗಿದೆ. ಅದು ಜನರ ಅಭಿಪ್ರಾಯ, ಆಶೋತ್ತರಗಳಾಗಿದ್ದು ಇಷ್ಟದಂತೆ ಬಳಸಬಹುದು. ಕಾಮಾಲೆ ಕಣ್ಣಿನವರಿಗೆ ಜಗತ್ತು ಹಳದಿಯೆಂಬಂತೆ ಕಾಂಗ್ರೆಸ್ ಪಕ್ಷ ವರ್ತನೆ ಮಾಡುತ್ತಿದೆ. ಅವರು ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದವರು ದೂರಿದರು.
ಆಹಾರ ಪದಾರ್ಥ ವಿಚಾರದಲ್ಲಿ ಜನರೇ ತೀರ್ಮಾನಿಸಬೇಕು ಎಂಬುದನ್ನು ಕಾಂಗ್ರೆಸ್ ಅಥವಾ ಬಿಜೆಪಿ ನಿರ್ಣಯಿಸಲು ಆಗಲ್ಲ. ಜನರೇ ಬೇಡ ಎಂದರೆ ನಾವು ಒತ್ತಾಯ ಮಾಡೋಕಾಗಲ್ಲ. ಕಾಂಗ್ರೆಸ್ಸಿಗರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರಿಗೆ ನಿಂತ ನೆಲ ಕುಸಿಯುವ ಭಾವನೆ ಬಂದಿದೆ. ಅವರ ಶಕ್ತಿ ಕ್ಷೀಣವಾಗುತ್ತಿರುವ ಹಾಗೂ ಡಿಕೆ ಶಿವಕುಮಾರ್ ತಮ್ಮ ಸ್ಥಾನ ಆಕ್ರಮಿಸಿ ಕೊಳ್ಳುವ ಭಯವಿದೆ. ತಾನು ಪ್ರಭಾವಿಯಾಗಿದ್ದೇನೆ ಎಂದು ತೋರಿಸಲು ಅವರು ಬಿಜೆಪಿ ಮೇಲೆ ಪ್ರಹಾರ ಮಾಡ್ತಿದ್ದಾರೆ ಅನಿಸುತ್ತಿದ್ದು ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಬಿ.ಸಿ ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿಗಳ ಹೊಸದಿಲ್ಲಿ ಪ್ರವಾಸದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಪತ್ರಿಕೆ, ಟಿವಿಯಲ್ಲಿ ನೋಡಿ ವಿಚಾರ ತಿಳಿದಿದ್ದು ಹೆಚ್ಚಿನ ಮಾಹಿತಿ ಇಲ್ಲವೆಂದು ಸಚಿವರು ಇದೇ ಸಂದರ್ಭ ಹೇಳಿದರು.