ಎ.14ರಿಂದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಸಮ್ಮೇಳನಾಧ್ಯಕ್ಷರಾಗಿ ಜಾನಪದ ವಿದ್ವಾಂಸ ಪ್ರೊ.ಎ.ವಿ.ನಾವಡ ಆಯ್ಕೆ
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ೧೫ನೆ ಕನ್ನಡ ಸಾಹಿತ್ಯ ಸಮ್ಮೇಳನ ‘ತುರಾಯಿ’- ಅನ್ವೇಷಣೆಯ ಪ್ರತಿಬಿಂಬ ಎಂಬ ಅಡಿಬರಹದೊಂದಿಗೆ ಎ.೧೪ರಿಂದ ೧೬ರವರೆಗೆ ಹಿರಿಯ ಜಾನಪದ ವಿದ್ವಾಂಸ, ವಿಶ್ರಾಂತ ಪ್ರೊಫೆಸರ್ ಎ.ವಿ.ನಾವಡ ಸಮ್ಮೇಳನಾಧ್ಯಕ್ಷತೆ ಯಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕವಿ ಮುದ್ದಣ ವೇದಿಕೆ ಯಲ್ಲಿ ನಡೆಯಲಿದೆ.
ಎ.೧೪ರಂದು ಅಪರಾಹ್ನ ೨.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣ ದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಕಾರ್ಯಕ್ರಮವನ್ನು ಎ.ವಿ.ನಾವಡ ಉದ್ಘಾಟಿಸಲಿರುವರು. ತಾಳಮದ್ದಲೆ, ಸಾಂಸ್ಕೃತಿಕ ವೈವಿಧ್ಯ, ಹೋಳಿ ಕುಣಿತ, ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಎ.೧೫ರಂದು ಬೆಳಗ್ಗೆ ೮.೩೦ಕ್ಕೆ ಧ್ವಜಾರೋಹಣ ನಡೆಯಲಿದ್ದು, ಬಳಿಕ ಸಮ್ಮೇ ಳಾನಾಧ್ಯಕ್ಷರನ್ನು ಕುಂದೇಶ್ವರ ದೇವಸ್ಥಾನದಿಂದ ಹೊಸ ಬಸ್ ನಿಲ್ದಾಣದವರೆಗೆ ಪುರ ಮೆರವಣಿಗೆಯೊಂದಿಗೆ ಕರೆತರಲಾಗುವುದು. ಬೆಳಗ್ಗೆ ೧೦ಗಂಟೆಗೆ ಸಚಿವ ಸುನೀಲ್ ಕುಮಾರ್ ಸಮ್ಮೇಳನವನ್ನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಿರುವರು.
ನಂತರ ವಿವಿಧ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ರಾಷ್ಟ್ರೀಯತೆ ಒಂದು ಚಿಂತನ, ನಮ್ಮ ಉಡುಪಿ, ಕವಿಗೋಷ್ಠಿ, ಕುಂದಾಪ್ರ ಕನ್ನಡದ ಭಾಷಾ ಸೊಗಡು- ಹರಟೆ, ಸಾಂಸ್ಕೃತಿಕ ವೈಭವ ಮತ್ತು ನಾಟಕ ನಡೆಯಲಿದೆ. ಎ.೧೬ರಂದು ಸಂಜೆ ೪ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಕಟೀಲು ಸಮಾರೋಪ ಭಾಷಣ ಮಾಡ ಲಿರುವರು. ಮುಖ್ಯ ಅತಿಥಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗ ವಹಿಸಲಿರುವರು.
ಈ ಸಂದರ್ಭದಲ್ಲಿ ನಾಡು ನುಡಿಗೆ ಸೇವೆ ಸಲ್ಲಿಸಿದ ೧೯ ಮಂದಿ ಸಾಧಕರಿಗೆ ಮತ್ತು ಆರು ಸಂಘಸಂಸ್ಥೆಗಳನ್ನು ಸನ್ಮಾನಿಸಲಾಗುವುದು. ನಡುನಡುವೆ ಕನ್ನಡ ಗೀತಾ ಗಾಯನ ಹಾಗೂ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ ಎಂದು ನೀಲಾ ವರ ಸುರೇಂದ್ರ ಅಡಿಗ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧ್ಯಕ್ಷ ಮನೋಹರ ಪಿ., ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಕಾಪು ಅಧ್ಯಕ್ಷ ಪುಂಡಲಿಕ ಮರಾಠೆ, ನರಸಿಂಹಮೂರ್ತಿ ರಾವ್ ಹಾಜರಿದ್ದರು.