ಜಾರ್ಖಂಡ್: ಕೇಬಲ್ ಕಾರ್ ಅಪಘಾತ; 3 ಸಾವು
16 ಗಂಟೆಗಳ ಕಾಲ ರೋಪ್ ವೇ ನಲ್ಲಿ ಸಿಕ್ಕಿಹಾಕಿಕೊಂಡ 48 ಮಂದಿ
ರಾಂಚಿ, ಎ. 11: ಜಾರ್ಖಂಡ್ನ ದಿಯೋಗಢ ಜಿಲ್ಲೆಯಲ್ಲಿರುವ ತ್ರಿಕೂಟ್ ಬೆಟ್ಟಕ್ಕೆ ರವಿವಾರ ಕೇಬಲ್ ಕಾರು ಢಿಕ್ಕಿಯಾದ ಪರಿಣಾಮ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 27 ಮಂದಿಯನ್ನು ರಕ್ಷಿಸಲಾಗಿದೆ. ಕನಿಷ್ಠ 20ಕ್ಕೂ ಅಧಿಕ ಮಂದಿಯನ್ನು ರಕ್ಷಿಸಬೇಕಾಗಿದೆ. ರಾತ್ರಿ ಆದುದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಗ್ಗೆ ಕಾರ್ಯಾಚರಣೆಯನ್ನು ಮರು ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ರೋಪ್ವೇಯಲ್ಲಿ ಸಿಲುಕಿಕೊಂಡ ಜನರಿಗೆ ಡ್ರೋನ್ ಮೂಲಕ ಆಹಾರ ಹಾಗೂ ನೀರು ಒದಗಿಸಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್)ನ ಉಪ ಕಮಾಂಡೆಂಟ್ ವಿನಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಖಚಿತ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ. ಘಟನೆ ಬಳಿಕ ರೋಪ್ವೇಗೆ ಖಾಸಗಿ ಕಂಪೆನಿ ನಿಯೋಜಿಸಿದ ಮ್ಯಾನೇಜರ್ ಹಾಗೂ ಇತರ ಉದ್ಯೋಗಿಗಳು ಪರಾರಿಯಾಗಿದ್ದಾರೆ. ಕೆಳಗೆ ಹಾರಿದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.