ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: "ತನ್ನ ಮೇಲೆ ಹಲ್ಲೆ ನಡೆದಿದೆ" ಎಂದು ಆರೋಪಿಸಿದ ಸಾಕ್ಷಿದಾರ
ಆರೋಪ ನಿರಾಕರಿಸಿದ ಪೊಲೀಸರು
ಲಕ್ನೋ,ಎ.12: ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಇನ್ನೋರ್ವ ಸಾಕ್ಷಿದಾರ ತನ್ನ ಮೇಲೆ ಹಲ್ಲೆಯನ್ನು ನಡೆಸಲಾಗಿದೆ ಮತ್ತು ಹೇಳಿಕೆಯನ್ನು ನೀಡದಂತೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿದ್ದು,ಹಲ್ಲೆಗೂ ಪ್ರಕರಣಕ್ಕೂ ಯಾವುದೇ ಸಂಬಂಧವನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಪ್ರಕರಣದಲ್ಲಿ ಕೇಂದ್ರ ಸಚಿವ ಹಾಗೂ ಲಖಿಂಪುರ ಸಂಸದ ಅಜಯ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಪ್ರತಿಭಟನಾ ನಿರತ ರೈತರ ಮೇಲೆ ವಾಹನವನ್ನು ನುಗ್ಗಿಸಿದ ಆರೋಪಿಯಾಗಿದ್ದಾನೆ.
ಪ್ರಕರಣದಲ್ಲಿ ಸಾಕ್ಷಿಯಾಗಿ ತನ್ನ ಪಾತ್ರದ ಕುರಿತು ರವಿವಾರ ರಾಮಪುರ ಜಿಲ್ಲೆಯಲ್ಲಿ ಜನರ ಗುಂಪೊಂದು ತನ್ನ ಮೇಲೆ ದಾಳಿ ನಡೆಸಿದೆ ಎಂದು ಹರ್ದೀಪ್ ಸಿಂಗ್ ಆರೋಪಿಸಿದ್ದಾರೆ. ಗುರುದ್ವಾರಾದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿ ಮರಳುತ್ತಿದ್ದಾಗ ಹಿಂದಿನಿಂದ ಬಂದಿದ್ದ ಎರಡು ಕಾರುಗಳಲ್ಲಿದ್ದ ಏಳೆಂಟು ಜನರು ತನ್ನನ್ನು ತಡೆದು ನಿಲ್ಲಿಸಿದ್ದರು. ಇಬ್ಬರು ತನ್ನನ್ನು ಥಳಿಸಿದ್ದರು. ಸಾಕ್ಷ ಹೇಳಿದರೆ ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವ ಸಿಂಗ್, ರಾಮಪುರದ ಸ್ಥಳೀಯ ಬಿಜೆಪಿ ನಾಯಕ ಮೆಹರ್ ಸಿಂಗ್ ದಯೋಲ್ ಮತ್ತು ಇನ್ನೋರ್ವನನ್ನು ಹೆಸರಿಸಿದ್ದಾರೆ.
ಸಿಂಗ್ ಆರೋಪವನ್ನು ತಿರಸ್ಕರಿಸಿರುವ ಪೊಲೀಸರು,ಲಖಿಂಪುರ ಖೇರಿ ಪ್ರಕರಣಕ್ಕೂ ಈ ಹಲ್ಲೆಗೂ ಸಂಬಂಧವಿಲ್ಲ. ತನಿಖೆ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ ಮೇಲ್ನೋಟಕ್ಕೆ ಇದೊಂದು ರಸ್ತೆ ಜಗಳವಾಗಿರುವಂತೆ ಕಂಡು ಬರುತ್ತಿದೆ. ಹಲ್ಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿಯೂ ಪ್ರಕರಣದ ಇನ್ನೋರ್ವ ಸಾಕ್ಷಿ ತನ್ನ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಲಾಗಿದೆ ಎಂದು ಆರೋಪಿಸಿದ್ದರು.