ನರೇಂದ್ರ ಮೋದಿ ಸರಕಾರ ಈ ವರ್ಷವೂ ಅಂಬೇಡ್ಕರ್ ಪ್ರಶಸ್ತಿಗಳನ್ನು ನೀಡುವುದಿಲ್ಲ !
2014ರಲ್ಲೇ ಸ್ಥಗಿತಗೊಂಡಿದ್ದ ಪ್ರಶಸ್ತಿ
ಹೊಸದಿಲ್ಲಿ,ಎ.13: ನರೇಂದ್ರ ಮೋದಿ ಸರಕಾರವು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಎ.14ರಂದು 2022ನೇ ಸಾಲಿಗೆ ಅವರ ಹೆಸರಿನ ಪ್ರಶಸ್ತಿಗಳನ್ನು ನೀಡುವುದಿಲ್ಲ. ಮೋದಿ ಸರಕಾರವು 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅಂಬೇಡ್ಕರ್ ಪ್ರಶಸ್ತಿಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ.
ಡಾ.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು 1992ರಲ್ಲಿ ಮತ್ತು ಡಾ.ಅಂಬೇಡ್ಕರ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು 1995ರಲ್ಲಿ ಸ್ಥಾಪಿಸಲಾಗಿತ್ತು.
2022,ಮೇ 9ರಂದು ಅಂಬೇಡ್ಕರ್ ಪ್ರತಿಷ್ಠಾನವು ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಕೋರಿ ಜಾಹೀರಾತುಗಳನ್ನು ಮುಂದಿರಿಸಿತ್ತು. ರಾಷ್ಟ್ರೀಯ ಪ್ರಶಸ್ತಿಯು 10 ಲ.ರೂ. ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಯು 15 ಲ.ರೂ.ಗಳ ನಗದು ಬಹುಮಾನಗಳನ್ನು ಒಳಗೊಂಡಿವೆ.
ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಹೊಂದಿಕೆಯಾಗುವ ಕಾರ್ಯಗಳನ್ನು ಮಾಡಿರುವ ಭಾರತದಲ್ಲಿಯ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಹೋರಾಟದಲ್ಲಿ ಅಥವಾ ರಚನಾತ್ಮಕ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿರುವವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಅಂಬೇಡ್ಕರ್ ಪ್ರತಿಷ್ಠಾನವು ಪ್ರತಿ ವರ್ಷ ಎ.14ರಂದು ಪ್ರಶಸ್ತಿಗಳನ್ನು ನೀಡುತ್ತದೆ. ಆದರೆ ಕೆಲವು ‘ಆಡಳಿತಾತ್ಮಕ ’ ಕಾರಣಗಳಿಂದಾಗಿ ಪ್ರಶಸ್ತಿಗಳನ್ನು ವಿತರಿಸಲಾಗುವುದಿಲ್ಲ ಎಂದು ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ವಿಕಾಸ್ ತ್ರಿವೇದಿ ಅವರು ದೃಢಪಡಿಸಿದ್ದಾರೆ.
ವಾಸ್ತವದಲ್ಲಿ 2015ರಿಂದಲೂ ಪ್ರಶಸ್ತಿಗಳನ್ನು ನೀಡದಿರಲು ಇದೇ ಕಾರಣವನ್ನು ಬಳಸಲಾಗುತ್ತಿದೆ ಮತ್ತು ಕೇಂದ್ರ ಸರಕಾರವು ಪ್ರಶಸ್ತಿಯನ್ನು ಪುನರ್ಪರಿಶೀಲಿಸುತ್ತಿದೆ ಎಂದೂ ಪ್ರತಿಷ್ಠಾನವು ತಿಳಿಸಿತ್ತು. ಇದೇ ರೀತಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು 2001ರಿಂದ ನೀಡಲಾಗುತ್ತಿಲ್ಲ ಮತ್ತು ಅಂಬೇಡ್ಕರ್ ಪ್ರತಿಷ್ಠಾನವು ಇದೇ ಕಾರಣವನ್ನು ನೀಡಿತ್ತು.
ಪ್ರಶಸ್ತಿಗಾಗಿ ವ್ಯಕ್ತಿಗಳ ಮತ್ತು ಸಂಸ್ಥೆಗಳ ನಾಮ ನಿರ್ದೇಶನ ಕೋರಿ ಪ್ರಸ್ತಾವವನ್ನು ಮಾ.9ರಂದು ಹೊರಡಿಸಿದ್ದು ಅಚ್ಚರಿದಾಯಕವಾಗಿದೆ.
ಪ್ರತಿಷ್ಠಾನದ ಮಾರ್ಗಸೂಚಿಗಳಂತೆ ನವಂಬರ್ನಲ್ಲಿ ಇಂತಹ ಪ್ರಸ್ತಾವವನ್ನು ಹೊರಡಿಸಬೇಕು ಮತ್ತು ಡಿ.31ರವರೆಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬಹುದು. ಆದರೆ 2022ರಲ್ಲಿ ಕೇವಲ 15 ದಿನಗಳ ಅವಕಾಶವನ್ನು ನೀಡಿ ಮಾ.9ರಂದು ಪ್ರಸ್ತಾವವನ್ನು ಹೊರಡಿಸಲಾಗಿತ್ತು. ಇದೇ ರೀತಿ ಅಂತರರಾಷ್ಟ್ರೀಯ ಪ್ರಶಸ್ತಿಗಾಗಿ ಜುಲೈ 1ರಂದು ಪ್ರಸ್ತಾವವನ್ನು ಹೊರಡಿಸಬೇಕು ಮತ್ತು ನ.30ರವರೆಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬಹುದು. ಆದರೆ 2022ರಲ್ಲಿ ಇದಕ್ಕಾಗಿ ಪ್ರಸ್ತಾವವನ್ನು ಮಾ.9ರಂದು ಹೊರಡಿಸಲಾಗಿತ್ತು.
ಅಲ್ಲದೆ 2022ರಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದಿಲ್ಲ ಎಂಬ ಮಾಹಿತಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಥವಾ ಇತರ ಯಾವುದೇ ಸಂಬಂಧಿತ ಸಚಿವಾಲಯ ಅಥವಾ ಇಲಾಖೆಯ ಜಾಲತಾಣಗಳಲ್ಲಿ ಪ್ರಕಟಿಸಲಾಗಿಲ್ಲ. ಸುದ್ದಿಸಂಸ್ಥೆಯು ಕಷ್ಟಪಟ್ಟು ಸ್ವಯಂ ತ್ರಿವೇದಿ ಅವರಿಂದಲೇ ಪ್ರಶಸ್ತಿಗಳನ್ನು ರದ್ದಗೊಳಿಸಿರುವುದನ್ನು ದೃಢಪಡಿಸಿಕೊಂಡಿದೆ.
ಜಾಹೀರಾತು ಹೊರಬಿದ್ದ ಬಳಿಕ ಪ್ರಧಾನಿ ಕಚೇರಿಯು ಸಚಿವಾಲಯದಿಂದ ಮತ್ತು ಪ್ರತಿಷ್ಠಾನದಿಂದ ಹೆಚ್ಚುವರಿ,ಸಂಬಂಧಿತ ಮಾಹಿತಿಯನ್ನು ಕೇಳಿತ್ತು ಎಂದು ಹೆಸರು ಹೇಳಿಕೊಳ್ಳಲು ಬಯಸದ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಡಾ.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆಗೊಂಡ 30 ವರ್ಷಗಳಲ್ಲಿ ಕೇವಲ ಏಳು ಬಾರಿ ಅದನ್ನು ವಿತರಿಸಲಾಗಿದೆ. 1995ರಲ್ಲಿ ಸ್ಥಾಪಿಸಲಾಗಿದ್ದ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಕೇವಲ ಎರಡು ಬಾರಿ ನೀಡಲಾಗಿದೆ.