ಬೆಲೆ ಏರಿಕೆಯ ಸಂಕಷ್ಟ
ಮಾನ್ಯರೇ,
ಬೆಲೆ ಏರಿಕೆಯ ಬಿಸಿಯು ಇಡೀ ದೇಶದ ಜನರ ಬದುಕನ್ನೇ ಸುಡುತ್ತಿದೆ. ಈಗಿನ ದುಬಾರಿ ದುನಿಯಾದಲ್ಲಿ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ಆದರೆ ಮಾಡುವ ಕೆಲಸಕ್ಕೆ ವೇತನ/ಕೂಲಿಯಲ್ಲಿ ಯಾವುದೇ ರೀತಿಯ ಹೆಚ್ಚಳವಾಗದಿರುವುದು ಜನರು ಇನ್ನಷ್ಟು ಸಂಕಷ್ಟದಲ್ಲಿ ದಿನದೂಡುವಂತಾಗಿದೆ. ಬೆಲೆ ಏರಿಕೆಯ ನೆಪವನ್ನಿಟ್ಟುಕೊಂಡು ಶಾಸಕರು ವೇತನವನ್ನು ದುಪ್ಪಟ್ಟು ಹೆಚ್ಚಿಸಿಕೊಂಡರು ಆದರೆ ಸಿಲಿಂಡರ್ ಬೆಲೆ, ವಿದ್ಯುತ್ ಬಿಲ್ ಹೆಚ್ಚಳ ಹೀಗೆ ಸಾಲು ಸಾಲು ಬೆಲೆ ಹೆಚ್ಚಳ ಮಾಡಿರುವ ಸರಕಾರ ಎಂದಾದರೂ ಬಡಜನತೆಯ ಬಗ್ಗೆ ಯೋಚಿಸಿದೆಯೇ? ರಸಗೊಬ್ಬರ, ಕೃಷಿ ಉಪಕರಣಗಳು, ಕೂಲಿ ಕಾರ್ಮಿಕರ ಕೂಲಿಯ ಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ. ಅವರು ಬೆಳೆದ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ ದರಗಳು ಸಿಗುತ್ತಿಲ್ಲ. ರೈತರಿಗೆ ಅಲ್ಪ ಸ್ವಲ್ಪ ಸಿಗಬೇಕಾದ ಲಾಭವು ಕೂಡ ಮಧ್ಯವರ್ತಿಗಳ ಪಾಲಾಗುತ್ತಿದೆ. ಎಷ್ಟೋ ವರ್ಷಗಳಿಂದ ಕೃಷಿಯನ್ನೇ ನೆಚ್ಚಿಕೊಂಡ ರೈತರು ಮೈತುಂಬ ಸಾಲ ಸೋಲ ಮಾಡಿ ಇನ್ನೂ ಬಡವರಾಗಿಯೇ ಉಳಿಯುತ್ತಿದ್ದಾರೆ. ಮಾಡಿದ ಸಾಲ ತೀರಿಸಲಾಗದೆ ಅಲ್ಲಲ್ಲಿ ನೇಣಿಗೆ ಶರಣಾಗುವ ಪ್ರಸಂಗಗಳು ಉಂಟು.
ಇದರ ಪರಿಣಾಮವಾಗಿ ಇಂದಿನ ರೈತಾಪಿ ವರ್ಗದ ಯುವ ಪೀಳಿಗೆಯು ಕೃಷಿಯತ್ತ ಹೆಚ್ಚು ಆಸಕ್ತಿ ತೋರದೆ ನಗರದತ್ತ ವಲಸೆ ಹೋಗುತ್ತಿದ್ದಾರೆ. ರೈತರ ಹೆಸರಿನಲ್ಲಿ ರೈತ ಪರ ಎಂದು ಹೆಸರು ಹೇಳಿಕೊಂಡು ಬಂದಿರುವ ಸರಕಾರಗಳು ಕೇವಲ ಮೂಗಿಗೆ ತುಪ್ಪಸವರುವ ಕೆಲಸ ಮಾಡುತ್ತಿವೆ. ಸರಕಾರ ಯಾವುದೋ ಕೆಲಸಕ್ಕೆ ಬಾರದ ಯೋಜನೆಗಳಿಗೆ ನೂರಾರು ಕೋಟಿ ಅನುದಾನ ನೀಡುವ ಬದಲು ದೇಶದ ಬೆನ್ನೆಲುಬಾಗಿರುವ ರೈತರ ನೆರವಿಗೆ, ಜನಸಾಮಾನ್ಯರ ನೆರವಿಗೆ ನಿಲ್ಲಬೇಕಾಗಿದೆ.