ಕಟ್ಟಡಕಾರ್ಮಿಕರ ಮಕ್ಕಳಿಗಾಗಿ ‘ರಜಾ ರಂಗೋಲಿ’ ಮಕ್ಕಳ ಮೇಳ
ಬೈಂದೂರು : ಡಿವೈಎಫ್ಐ ಪಡುಕೋಣೆ, ಜನಶಕ್ತಿ ಸೇವಾ ಟ್ರಸ್ಟ್ ಮತ್ತು ಸಮುದಾಯ ಕುಂದಾಪುರ ಸಹಭಾಗಿತ್ವ ದಲ್ಲಿ ಕಟ್ಟಡಕಾರ್ಮಿಕರ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಪಡುಕೋಣೆ ಆಸುಪಾಸಿನ ಮಕ್ಕಳಿಗಾಗಿ ಎಂಟು ದಿನಗಳ ರಜಾ ರಂಗೋಲಿ ಮಕ್ಕಳ ರಜಾ ಮೇಳವನ್ನು ಪಡುಕೋಣೆಯ ಗ್ರೆಗರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಜನಶಕ್ತಿ ಸೇವಾ ಟ್ರಸ್ಟ್ ಹಿರಿಯ ಮುಖಂಡ ಪಿಲಿಪ್ ಡಿಸಿಲ್ವಾ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕೇವಲ 4 ಗೋಡೆಯ ಮಧ್ಯದಲ್ಲಿ ಪಠ್ಯ ಪುಸ್ತಕಗಳನ್ನು ಓದಿ ಬೆಳೆಯುವುದು ಮಾತ್ರ ಮುಖ್ಯವಲ್ಲ, ಅವರಲ್ಲಿರುವ ಪ್ರತಿಭೆ ಗಳನ್ನು ಗುರುತಿಸುವುದು ಮತ್ತು ಅವಕಾಶವನ್ನು ಒದಗಿಸುವ ಕೆಲಸ ಆಗಬೇಕು. ಕೆಲವು ಮಕ್ಕಳಿಗೆ ಕೀಳರಿಮೆ ಇರುತ್ತದೆ. ಅಂತಹ ಮಕ್ಕಳಿಗೆ ಅವರ ಪ್ರತಿಭೆ ಹೊರತರಲು ಈ ಶಿಬಿರ ಸಹಕಾರಿ ಆಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಸದಾನಂದ ಬೈಂದೂರು, ಈ ರಜಾ ಶಿಬಿರದಲ್ಲಿ ಹೊಸ ಹೊಸ ವಿಷಯಗಳನ್ನು, ಕುಣಿತ, ಗಾಯನ, ಆಟಗಳ ಜೊತೆ ಪಾಠ, ನಾಟಕ, ಯಕ್ಷಗಾನ, ಕ್ರಾಫ್, ಡ್ರಾಯಿಂಗ್, ಕ್ಲೆಮಾಡೆಲಿಂಗ್, ಹಾಡು ಕವನಗಳು ಮಕ್ಕಳಿಂದ ರಚನೆಯಾಗಲಿದೆ. ಅಲ್ಲದೆ ಮಕ್ಕಳಲ್ಲಿ ನಾಯಕತ್ವ ಬೆಳೆಯಲಿದೆ ಎಂದು ಅಭಿಪ್ರಾಯ ಪಟ್ಟರು.
ಶಿಬಿರದ ನಿರ್ದೇಶಕ ರಂಗ ತಜ್ಞ ವಾಸುದೇವ ಗಂಗೇರ ಮಾತನಾಡಿದರು. ಡಿವೈಎಫ್ಐ ಪಡುಕೋಣೆ ಅಧ್ಯಕ್ಷ ನಾಗರಾಜ್ ಕುರು ಅಧ್ಯಕ್ಷತೆ ವಹಿಸಿದ್ದರು. ರಾಜೀವ ಪಡುಕೋಣೆ, ಸುರೇಶ್ ಕಲಾಗಾರ್, ಪಿಲೊಮಿನಾ, ಅನಿತಾ, ವಿಕ್ಟರ್, ಉಪಸ್ಥಿತರಿದ್ದರು. ಸುಬ್ರಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ವಂದಿಸಿದರು.